Sunday, December 28, 2008

manipal - bengaluru rightsszzzss ಪೋಯಿ !!!!!






ನಮಸ್ಕಾರ ಎಲ್ಲರಿಗೂ!!

ಈ ಬ್ಲಾಗನ್ನು ಪ್ರಾರಂಭಿಸಿದಾನಂತರದ ಮೊದಲನೆಯ ಪ್ರಯಾಣದ ಟಿಪ್ಪಣಿ ಇದು. ಈ ಹಿಂದೆ ನಡೆದ ಪ್ರಯಾಣಗಳ ಸಂಕ್ಷಿಪ್ತ ಟಿಪ್ಪಣಿಗಳು ಇನ್ನು ಮುಂದೆ ಬರುವ ಸಾಧ್ಯತೆ ಇದೆ. ಮಣಿಪಾಲದಿಂದ ಬೆಂಗಳೂರಿಗೆ ನಮ್ಮ ಪ್ರಯಾಣ. ಮಣಿಪಾಲೇತರ ನಿವಾಸಿಗಳಿಗೆ ಈ ಪ್ರಯಾಣ ಅನಾಯಾಸವೆನಿಸುತ್ತದೆ. ಕಾರಣ ಎಲ್ಲರೂ ತಕ್ಷಣ ನೆನೆಸಿಕೊಳ್ಳುವುದು ಆ ಹಾದಿಯಲ್ಲಿ ಟ್ರಿಪ್ ಮಾಡುವ ದುರ್ಗಾಂಬ, ಸುಗಮ, ಐಡಿಯಲ್. ಪ್ರಗತಿ, ಸೀ ಬರ್ಡ್, ವಿಶಾಲ್ ಹೀಗೆ ಹತ್ತಾರು ಬಸ್ ಕಂಪನಿಗಳ ಹೆಸರುಗಳು ಅಥವಾ ಮಂಗಳೂರಿನಿಂದ ಬೆಂಗಳೂರಿಗೆ ರಾತ್ರಿವೇಳೆಗೆ ಹಲವಾರು ಸುರಂಗಗಳ ಮಾರ್ಗದಲ್ಲಿ ಓಡುವ ಉಗಿಬಂಡಿಗಳು. ಆದರೆ ಬಸ್ಸಿನಲ್ಲಿ ಆಗಾಗ್ಯೆ ಓಡಾಡಿದವರಿಗೆ ಇದರ ತ್ರಾಸ ಅರ್ಥವಾಗುತ್ತದೆ. ರಾತ್ರಿ ಎಷ್ಟೆ ಹೊತ್ತಿಗೆ ಹೊರಟರು ಅಂತ್ಯ ಸ್ಥಾನ ಸೇರುವುದು ಬೆಳಿಗ್ಗೆ ಎಂಟರ ನಂತರವೇ. ಅಂದರೆ ಇದು ಕನಿಷ್ಟ ೧೨ ತಾಸುಗಳ ತ್ರಾಸಿನ ಪ್ರಯಾಣ.

ಕರಾವಳಿ ಕರ್ನಾಟಕದಿಂದ ಬೆಂಗಳೂರಿಗೆ ಬರಲಿಕ್ಕೆ ಕೆಲವು ಘಾಟಿಗಳಿವೆ. ಶಿರಾಡಿ, ಚಾರ್ಮಾಡಿ, ಆಗುಂಬೆ, ಕೆರೆಕಟ್ಟೆ ಅವುಗಳಲ್ಲಿ ಕೆಲವು. ಯಾವ ಘಾಟಿಯ ರಸ್ತೆಯೂ "ಬಹಳ ಚೆನ್ನಾಗಿದೆ.... ಮತ್ತೊಮ್ಮೆ ಬರಲೇಬೇಕು" ಅಂತ ಅನ್ನಿಸುವುದಿಲ್ಲ. ಕಾರಣ ಕಳಪೆ ಕಾಮಗಾರಿ, ಸಾವಿರಾರು ವಾಹನಗಳ ಓಡಾಟ, ಹಾಗು ಮಳೆಗಾಲದಲ್ಲಿ ಎಡಬಿಡದೆ ಸುರಿಯುವ ಮಳೆ. ಈ ಘಾಟಿಗಳಲ್ಲಿ ಬಸ್ಸುಗಳು ಹೋಗುವಾಗ ದೋಣಿಯಲ್ಲಿ ಕುಳಿತಷ್ಟು ಮಜ ಕೊಡುತ್ತದೆ. ಒಮ್ಮೆ ಬಲಕ್ಕೆ ವಾಲಿದ ಹಾಗೆ ಆದರೆ ಮತ್ತೊಮ್ಮೆ ಎಡಕ್ಕೆ. ಅಷ್ಟರಲ್ಲೇ ಬ್ರೇಕ್ ಹಾಕಿ ಮುಂದಕ್ಕೋ ಹಿಂದಕ್ಕೋ ಬಿದ್ದಿರುತ್ತೇವೆ. ಬಸ್ನವರಿಗೆ ಓಡಿಸಲಿಕ್ಕೆ ಬರುವುದಿಲ್ಲವೋ ಅಥವಾ ರೋಡುಗಳು ಇರೋದೇ ಹಾಗೊ ಎಂದು ಹಲವಾರು ಬಾರಿ ಅನಿಸಿದೆ.
ಪ್ರಶಾಂತ್(ಪಚ್ಚಿ) ಹಾಗು ನಾನು ಈ ಪ್ರಯಾಣವನ್ನು ನಮ್ಮ ಹೊಸ ವಾಹನಗಳ ಖರೀದಿಯಾದ ದಿನದಿಂದಲೂ ಸ್ಕೆಚ್ ಹಾಕುತ್ತಿದ್ದೆವು. ಪಚ್ಚಿ ಗಾಡಿ ಹಳೆಯದಾಗಿ ಮತ್ತೊಂದು ಹೊಸ ಗಾಡಿ (ಬಜಾಜ್ ಪಲ್ಸಾರ್) ಕೊಂಡು ೨ ತಿಂಗಳ ನಂತರವಷ್ಟೇ ಈ ಪ್ರಯಾಣಕ್ಕೆ ಶುಭ ಮುಹೂರ್ತ ಬಂದಿತು.


ಟ್ರಿಪ್ ದಿನಾಂಕ - 25-12-2008
ಟ್ರಿಪ್ ಮೀಟರ್ - 402 ಕಿ ಮೀ
ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಕಾರ್ಕಳ (34)- ಬಜಗೋಳಿ (44)- ನಾರವಿ (58)- ಗುರುವಾಯನಕೆರೆ (79)- ಬೆಳ್ತಂಗಡಿ (83)- ಉಜಿರೆ (88)- ಮುಂಡಾಜೆ (95)- ಚಾರ್ಮಾಡಿ (103)- ಕೊಟ್ಟಿಗೆಹಾರ (127)- ಬಣಕಲ್ (131)- ಮೂಡಿಗೆರೆ (141)- ಗೋಣಿಬೀಡು (150)- ಬೇಲೂರು (176)- ಹಾಸನ (214)- ಚೆನ್ನರಾಯಪಟ್ಟಣ (258)- ಕುಣಿಗಲ್ (327)- ನೆಲಮಂಗಲ (362)- ಬೆಂಗಳೂರು (402).

ಮಣಿಪಾಲದ ನಮ್ಮ ಮನೆಯಿಂದ ಸರಿಯಾಗಿ ಬೆಳಿಗ್ಗೆ 5:30 ಗಂಟೆಗೆ ಹೊರಟೆವು. ಮಣಿಪಾಲದಿಂದ ಕಾರ್ಕಳಕ್ಕೆ ಒಂದೇ ದಾರಿ. ನೇರ ಮಾರ್ಗ. ಅಲ್ಲಿಂದ ಧರ್ಮಸ್ಥಳ ಮಾರ್ಗ ಹಿಡಿಯಬೇಕು. ಈ ಮಾರ್ಗದ ವಿರುದ್ಧ ದಿಕ್ಕಿನಲ್ಲಿ ಹೊರಟರೆ ಮಂಗಳೂರು ಸೇರಿಬಿಡುತ್ತೀರಿ. ಎಚ್ಚರಿಕೆ!! ಸ್ವಲ್ಪ ದೂರದಲ್ಲೇ ಬಜಗೋಳಿ ಎಂಬ ಸಣ್ಣ ಊರು. ಇಲ್ಲಿಂದಲೂ ನೇರವಾಗಿಯೇ ಚಲಿಸಿ. ಎಡಕ್ಕೆ ತಿರುಗಿದಲ್ಲಿ ಕುದರೆಮುಖ, ಶೃಂಗೇರಿ ಸೇರುತ್ತೀರಿ. ಬಜಗೋಳಿಯಿಂದ ನೇರ ಹೊರಟರೆ ನಾರವಿ, ಗುರುವಾಯಂಕೆರೆ ದಾಟಿ ಬೆಳ್ತಂಗಡಿ ಸೇರುವಿರಿ. ಬೆಳ್ತಂಗಡಿಯಲ್ಲಿ ಅಷ್ಟೇನೂ ಖಾಸ್ ಅಲ್ಲದ ಬಸ್ ಸ್ಟಾಂಡ್ ಹೊಟೆಲ್- ಪ್ರಕಾಶ್ ನಲ್ಲಿ ತಿಂಡಿ ಚಹಾ ಮುಗಿಸಿದೆವು. ಬೆಳ್ತಂಗಡಿ ವರೆಗೂ ತಿಂಡಿಗೆ ಬಹಳ ಒಳ್ಳೆಯ ಹೊಟೇಲುಗಳು ವಿರಳ. ಗುರುವಾಯಂಕೆರೆಯಲ್ಲಿ ಅಂತಹ ಒಳ್ಳೆಯ ಹೊಟೆಲ್ ಕಾಣಲಿಲ್ಲ. ಉಜಿರೆಯಲ್ಲಿ ಹೊಟೆಲ್ ಮಿಸ್ ಮಾಡಿಕೊಂಡ್ರೆ ಮುಂದೆ ನಿಮಗೆ ಮೂಡಿಗೆರೆಯೇ ಗಟ್ಟಿ. ನಮಗಂತೂ ಹೊಟ್ಟೆ ತುಂಬಿತ್ತು. ಹಾಸನದಿಂದ 29 ಕಿಮೀ ದೂರದಲ್ಲಿದ್ದ ಬರಗೂರಲ್ಲೇ ಕಾಮತ್ ಉಪಚಾರ್ ನಲ್ಲಿ ಊಟ ಮಾಡಿದ್ದು. ಇಷ್ಟನ್ನು ಬಿಟ್ಟರೆ ಮಧ್ಯೆ ಮಧ್ಯೆ ನೀರು, ನಾರಿಕೀಲ, ಚಹಾ ಸೇವಿಸಲು ಅಲ್ಲಲ್ಲಿ ನಿಲ್ಲಿಸುತ್ತಿದ್ದೆವು.

ಮಧ್ಯದಲ್ಲಿ ದಾರಿ ತಪ್ಪಿಯೋ ಆಸೆ ಬದಲಾಗಿಯೋ ಬೇರೆ ಊರಿಗೆ ಹೋಗಬಹುದಾದ ಸಂದರ್ಭ ಬಹಳಷ್ಟಿವೆ.
೧) ಕಾರ್ಕಳದಿಂದ ಬಜಗೋಳಿ ಹೋಗುವ ದಾರಿಯಲ್ಲಿ ಎಡಕ್ಕೆ ತಿರುವಿದೆ. ಆ ತಿರುವು ನಿಮ್ಮನ್ನು ಶೃಂಗೇರಿ, ಕುದುರೆಮುಖಕ್ಕೆ ಸೇರಿಸುತ್ತದೆ.
೨) ಗುರುವಾಯಂಕೆರೆಯಿಂದ ಬೆಳ್ತಂಗಡಿ ಹೋಗುವಾಗ ಬಲಕ್ಕೆ ತಿರುವೊಂದು ಮಂಗಳೂರನ್ನು ಸೇರಿಸುತ್ತದೆ.
೩) ಉಜಿರೆಯಿಂದ ನೇರ ಮಾರ್ಗ ಮುಂಡಾಜೆಗೆ, ಬಲ ತಿರುವು ಧರ್ಮಸ್ಥಳಕ್ಕೆ - 10 ಕಿ ಮಿ ಉಜಿರೆಯಿಂದ.
೪) ಮೂಡಿಗೆರೆಯಿಂದ ಒಂದು ಮಾರ್ಗ ಚಿಕ್ಕಮಗಳೂರಿಗೆ ಕರೆದೊಯ್ಯುತ್ತದೆ ಮತ್ತೊಂದು ಬೇಲೂರಿಗೆ.
೫) ಗೋಣಿಬೀಡಿನಿಂದ ಸಕಲೇಶಪುರಕ್ಕೆ ದಾರಿ ಇದೆ. ಎಷ್ಟು ಸುಗಮ ಎಂದು ನೀವೇ ಕಂಡುಹಿಡಿದುಕೊಳ್ಳಬೇಕು.
೬) ಬೇಲೂರು ಚೆನ್ನಕೇಶವನ ದರ್ಶನದ ನಂತರ 15 ಕಿ ಮಿ ದೂರದಲ್ಲಿ ಹಳೇಬೀಡನ್ನು ವೀಕ್ಷಿಸಬಹುದು.
೭) ಕೊಟ್ಟಿಗೆಹಾರದಿಂದ ಬೇಲೂರಿಗೆ ರಾಜ್ಯ ಹೆದ್ದಾರಿ SH 58; ಬೇಲೂರಿನಿಂದ ಹಾಸನಕ್ಕೆ ರಾಜ್ಯ ಹೆದ್ದಾರಿ SH 57. ಹಾಸನದಿಂದ ಬೆಂಗಳೂರಿಗೆ ರಾಷ್ಟ್ರೀಯ ಹೆದ್ದಾರಿ NH 48.
೮) ಹಾಸನದಿಂದ ಮೈಸೂರಿಗೆ, ಶಿವಮೊಗ್ಗಕ್ಕೆ ಎರ್‍ಅಡು ಪ್ರತ್ಯೇಕ ದಾರಿಗಳಿವೆ.
೯) ಶ್ರವಣಬೆಳಗೊಳದ ಗೊಮ್ಮಟೇಶ್ವರನ ದರ್ಶನಕ್ಕೆ ಚೆನ್ನರಾಯಪಟ್ಟಣದಿಂದ 15 ರಿಂದ 20 ಕಿ ಮೀ.


ರಸ್ತೆಯ ವಿಷಯಕ್ಕೆ ಬಂದರೆ ಮಣಿಪಾಲದ ಊರೊಳಗಿನ ರಸ್ತೆಗಳು ಹದಗೆಟ್ಟಿದ್ದರೂ ಕಾರ್ಕಳದವರೆಗೂ ಸುಂದರವಾಗಿದೆ. ಉಜಿರೆವರೆಗಿನ ರಸ್ತೆ ಅಲ್ಲಲ್ಲಿ ಹಾಳಾಗಿದೆಯಾದರು ಕೆಲವೆಡೆ ಡಾಂಬರೀಕರಣದಿಂದ ಸುಗಮವೆನಿಸುತ್ತದೆ. ಚಾರ್ಮಾಡಿ ಘಾಟ್ ತೀರ ಹದಗೆಟ್ಟು ಹೋಗಿಲ್ಲವಾದರೂ ಅಲ್ಲಲ್ಲಿ ಧರೆ ಕುಸಿಯುವ ಭಯವಿರುವುದರಿಂದ ಜಾಗರೂಕತೆಯಿಂದ ಮುನ್ನಡೆಯಬೇಕು. ಹಿಮ್ಮುರುವುಗಳು ಆಗುಂಬೆ ಘಾಟಿಯಷ್ಟೆ ಭಯಂಕರವಾಗಿದೆ. ಕೊಟ್ಟಿಗೆಹಾರದಿಂದ ಬೇಲೂರಿಗೆ ಒಂದೆರೆಡು ಮುರುವುಗಳಿವೆ. ಉಳಿದ ಹಾಗೆ ರಸ್ತೆ ಬೈಕ್, ಕಾರ್ ಓಡಿಸುವವರಿಗೆ ಒಳ್ಳೆಯ ಮಜ ನೀಡುತ್ತದೆ. ಬೇಲೂರಿನಿಂದ ನೆಲಮಂಗಲಕ್ಕೆ ಬರುವವರೆಗೂ ಬೆರಳೆಣಿಕೆಯಷ್ಟು ಬಾರಿ ಗೇರ್ ಬದಲಿಸುವ ಸಂದರ್ಭ ಬರಬಹುದು. ರಸ್ತೆ ನವೀನವೆನಿಸುತ್ತದೆ.

ಶುಭ ಪ್ರಯಾಣ ಹಾರೈಸುವ,

ನಿಮ್ಮ ಪ್ರಕೊಪ

Tuesday, December 9, 2008

ಪಯಣಿಗನೆಂಬ ಕೊರಕನ ಕೋರಿಕೆ!!!!

ಎಲ್ಲರಿಗೂ ನಮಸ್ಕಾರಗಳು.

ಎರಡು ಬಾರಿ ನಾನು ಅಮೇರಿಕಾಕ್ಕೆ ಹೋಗಿದ್ದೇನೆ. ಎರಡು ಬಾರಿ ಹೋದಾಗಲೂ ೩ ತಿಂಗಳು ಅಲ್ಲಿ ತಂಗಿದ್ದೇನೆ. ಹತ್ತಿರದಲ್ಲಿ ಎಲ್ಲಿಗೆ ಹೋಗಬೇಕಾದರೂ ಕಾರಿನ ಮೊರೆಹೋಗಬೇಕಷ್ಟೇ! ಚಾಲಕ ಎಷ್ಟೇ ಪ್ರವೀಣನಾದರೂ ನಾವಿಕನ ಅಗತ್ಯ ಅತಿಹೆಚ್ಚು. ಆ ನಾವಿಕ ಮನುಶ್ಯನೇ ಆಗಬೇಕು ಎಂಬಂತಿಲ್ಲ. ಮುದ್ದಾದ ಹುಡುಗಿ ಜಿ.ಪಿ.ಎಸ್ ರೂಪದಲ್ಲೂ ಸಹಾಯಕ್ಕೆ ಬರುತ್ತಾಳೆ ಕೆಲವಷ್ಟು ಡಾಲರ್ ಗಳ ಸುಲಿಗೆಯಷ್ಟೆ. ಅಂತ್ಯದಲ್ಲಿ ನೀವು ಸೇರಬೇಕಾದ ಸ್ಥಳ ಸೇರುತ್ತೀರೋ ಇಲ್ಲವೋ ಗೊತ್ತಿಲ್ಲ ಆದರೆ ಸೇರುವಷ್ಟರಲ್ಲಿ ಮಬ್ಬಾಗಿಬಿಟ್ಟಿರುತ್ತೀರ!! ನಕಾಶೆಗೂ ಹೇಳಿಕೊಳ್ಳುವಂತಹ ಕಷ್ಟವೇನೂ ಇಲ್ಲ. ಗೂಗಲ್ ನಲ್ಲಿ ಹೊರಡುವ ಸ್ಥಳದ ವಿಳಾಸ, ಸೇರುವ ಸ್ಥಳದ ವಿಳಾಸವನ್ನು ಸರಿಯಾಗಿ ತಿಳಿಸಿದರೆ ಪಕ್ಕ ಸುಲಭ ದಾರಿಯ ನಕಾಶೆ ತಯಾರುಮಾಡಿಕೊಡುತ್ತದೆ. ಅಂತಹ ನಕಾಶೆ ಹಿಡಿದು ಜನರು ಹೊರಟುಬಿಡುತ್ತಾರೆ. 

ಭಾರತದಲ್ಲಿ ಹಾಗಾಗುವುದಿಲ್ಲ. ಎಲ್ಲಿಗಾದರೂ ಹೋಗಬೇಕಾದರೆ ಆ ಸ್ಥಳದ ಬಗ್ಗೆ ಅಲ್ಪ ಸ್ವಲ್ಪ ತಿಳಿದಿರುವ ಸ್ನೇಹಿತರನ್ನು, ಬಂಧುಗಳನ್ನು ಕೇಳಿ ಎಲ್ಲಾವನ್ನು ತಿಳಿದುಕೊಂಡು ಹೊರಡುತ್ತಾರೆ. ದುರಾದೃಷ್ಟವಶದಿಂದ ಯಾರಿಗೂ ಆ ಸ್ಥಳದ ಬಗ್ಗೆ ತಿಳಿದಿರದಿದ್ದರೆ .... ದೇವರೇ ಗತಿ. ಪ್ರತಿಯೊಬ್ಬರೂ ಕೊಲಂಬಸ್ ಗಳಾಗಲು ಆರಂಭಿಸುತ್ತಾರೆ. ಇಂತಹ ಕಷ್ಟಗಳಿರಬಾರದೆಂದರೆ ನಮ್ಮಲ್ಲೂ ಅಂತಹ ಒಂದು ನಕಾಶೆಯ ಅಗತ್ಯತೆ ಇದೆ. ಅದು ಅಂತರ್ಜಾಲದ ರೂಪದಲ್ಲಾದರೂ ಆಗಬಹುದು, ಅಥವಾ ಪುಸ್ತಕ ರೂಪದಲ್ಲಾದರೂ ಆಗಬಹುದು. ಅಂತಹ ದೃಷ್ಟಿಯನ್ನಿಟ್ಟುಕೊಂಡು ಈ ಬ್ಲಾಗನ್ನು ಆರಂಭಿಸುತ್ತಿದ್ದೇನೆ. ಈ ಬ್ಲಾಗ್ ನ ಮುಖ್ಯ ಉದ್ದೇಶ ಹೊಸ ಜಾಗಗಳನ್ನು ಪರಿಶೋಧಿಸುವಂತಹದ್ದು. ಆ ಜಾಗಕ್ಕೆ ತಲುಪುವ ಒಂದು ಸುಲಭ ಮಾರ್ಗಸೂಚಿಯನ್ನಾಗಿಸುವಂತಹದ್ದು. ಈ ಬ್ಲಾಗ್ ನಲ್ಲಿ ಯಾರಾದರೂ ತಮ್ಮ ಪ್ರಯಾಣ-ಪರಿಶೋಧನೆ ಬಗ್ಗೆ ಬರೆಯಬಹುದು. ಬರೆದು ಸಹಕರಿಸಿ. ಓದಿ ಉಪಯೋಗ ಪಡೆಯಿರಿ.

ಇಂತಿ ನಿಮ್ಮ
ಪ್ರಕೊಪ