Saturday, January 17, 2009

ಮಣಿಪಾಲ್ - ಕಾರ್ಲ - ಮೂಡ್ಬಿದ್ರಿ












ಕಳೆದ ವಾರಂತ್ಯದ ಪ್ರಯಾಣ ಮೂಡುಬಿದಿರಿಗೆ. ಮಣಿಪಾಲದಿಂದ ಮೂಡುಬಿದಿರಿಗೆ ಮಾರ್ಗಗಳು ಎರಡು. ಒಂದು ಮಣಿಪಾಲ - ಉಡುಪಿ - ಮಂಗಳೂರು - ಮೂಡುಬಿದರಿ ಅಥವಾ ಮಣಿಪಾಲ - ಕಾರ್ಕಳ - ಮೂಡುಬಿದರಿ. ಎರಡನೆಯ ಮಾರ್ಗ 60 ಕಿಮಿ ದೂರ. ನ್ಯಾಯವಾಗಿ ಅಂದರೆ ಸಾಧಾರಣ ವೇಗದಲ್ಲಿ ದ್ವಿಚಕ್ರ ವಾಹನ ಚಲಿಸಿದರೆ, 90 ನಿಮಿಷದ ಪ್ರಯಾಣ. ಅಲ್ಲಿ ಇಲ್ಲಿ ಚಹಾ-ಗೋಳಿಬಜೆ-ಬೀಡಿ ಅಂತ ನಿಲ್ಲಿಸುತ್ತಾ ಹೋದರೆ ಎರಡು ಗಂಟೆಯಲ್ಲಿ ತಲುಪಬಹುದು. ಮಧ್ಯದಲ್ಲಿ ಚಹಾ-ಗೋಳಿಬಜೆಗೆ ನಿಲ್ಲಿಸದೇ ಯಾವುದಾದರೂ ಒಳ್ಳೆಯ ಪ್ರೇಕ್ಷಣೀಯ ಸ್ಥಳ ನೋಡೋಣವೆಂಬುದು ನಮ್ಮ ಗುರಿಯಾಗಿತ್ತು. ಅಂತು ಇಂತು ಪ್ರಕಾಶ್ ಶೆಣೈ ಒಂದು ಮಾರ್ಗಸೂಚಿ ಸಿದ್ಧಪಡಿಸಿದ್ದ. ಅನುಮೋದಿಸುವುದಕ್ಕೆ ಹೆಚ್ಚೇನು ಗೊತ್ತಿಲ್ಲವಾದ್ದರಿಂದ ಅವನು ಹೇಳಿದ್ದಕ್ಕೆಲ್ಲಾ ಒಪ್ಪಿಯಾಗಿತ್ತು. ಪ್ರವಾಸ ಮಾರ್ಗ ಕೊಡ್ಯಡ್ಕದ ಅನ್ನಪೂರ್ಣೇಶ್ವರಿ ದೇವಸ್ಥಾನ, ಮೂಡುಬಿದಿರಿಯ ಸಾವಿರ ಕಂಬದ ಬಸದಿ, ಹಾಗು ಕರಾವಳಿ ಕರ್ನಾಟಕದಲ್ಲಿ ಚಿರಪರಿಚಿತರಾದ ಶ್ರೀ ಮೋಹನ್ ಆಳ್ವಾ ರವರು ನಡೆಸಿಕೊಡುವ "ಆಳ್ವಾಸ್ ವಿರಾಸತ್" ಗಳನ್ನೆಲ್ಲಾ ವೀಕ್ಷಿಸುವುದು.

ಮಣಿಪಾಲದಿಂದ ಸಾಧಾರಣ 10:30ಕ್ಕೆ ಹೊರಟು ಮೊದಲಿಗೆ ಕಾರ್ಕಳಕ್ಕೆ ಬಂದು ಸೇರಿದೆ. ಕಾರ್ಕಳ ಬಸ್ ಸ್ಟಾಂಡಿಗಿಂತಲೂ ಎರಡು ಕಿಮಿ ಮುಂಚೆಯೇ ಜೋಡುಕಟ್ಟೆ ಎಂಬ ಊರು ಸಿಗುತ್ತದೆ. ಇಲ್ಲಿಂದ ಕಾರ್ಕಳದ ಗೊಮ್ಮಟೇಶ್ವರನ ಏಕಶಿಲಾ ಮೂರ್ತಿ, ಚತುರ್ಮುಖ ಬಸದಿ ಗೆ ಸುಮಾರು 3 ಕಿಮಿ ದೂರ. ಜೋಡುಕಟ್ಟೆಯಿಂದ ನೇರ ಮಾರ್ಗದಲ್ಲಿ ಚಲಿಸಬೇಕು. ಕಾರ್ಕಳದ ಈ ಎರಡು ಸ್ಥಳಗಳನ್ನು ವೀಕ್ಷಿಸಿ ನಂತರವೂ ಮೂಡುಬಿದಿರಿ ಕಡೆಗೆ ಹೋಗಬಹುದು. ಕಾರ್ಕಳವನ್ನು ಬೈಪಾಸ್ ಮಾಡಲಿಚ್ಛಿಸುವವರು ಇಲ್ಲಿಂದ ಬಲಬದಿಗಿರುವ ಮಂಗಳೂರಿಗೆ ಹೋಗುವ ಉಪಮಾರ್ಗದಲ್ಲಿ ಚಲಿಸಬಹುದು. ಇಲ್ಲಿಂದ ಮಂಗಳೂರಿಗೆ 52 ಕಿಮಿ. ಅದೇ ರಸ್ತೆಯಲ್ಲಿ ಅತ್ತೂರು ಚರ್ಚ್ ಇದೆ. ಇದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲವಾದ್ದರಿಂದ ಆನಂದ ಯಾಲಿಗಾರರ ಬ್ಲಾಗಿಗೆ ಲಿಂಕ್ ಮಾಡುತ್ತೇನೆ.http://yalanand.blogspot.com/2008_08_01_archive.html ಅದೇ ನೇರ ರಸ್ತೆಯಲ್ಲಿ ಸಾಗುತ್ತಾ ಹೋದರೆ, ಒಂದು ವೃತ್ತ. ಒಂದು ರಸ್ತೆ ಬಜಗೋಳಿ-ಶೃಂಗೇರಿ ಸೇರುತ್ತದೆ. ಪಶ್ಚಿಮದ್ದು ಪಡುಬಿದಿರಿಗೆ ಕರೆದೊಯ್ಯುತ್ತದೆ. ನೇರ ಮಾರ್ಗ ಮಂಗಳೂರಿಗೆ. ರಸ್ತೆ ರಾಷ್ಟ್ರೀಯ ಹೆದ್ದಾರಿ 13. ಅದೇ ರಸ್ತೆಯಲ್ಲಿ ಮುಂದುವರಿದರೆ, ಅಲಂಗಾರು ಎಂಬ ಊರು ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ 5 ಕಿಮಿ ಚಲಿಸಿದರೆ, ಕೊಡ್ಯಡ್ಕ ಕ್ಷೇತ್ರ. ಇಲ್ಲಿನ ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಮುಂದಾದೆವು. ಸುಮಾರು ೮-೧೦ ವರ್ಷಗಳ ಹಿಂದೆಯಷ್ಟೇ ಈ ದೇವಸ್ಥಾನ ನಿರ್ಮಿತವಾದದ್ದು. ಭಕ್ತನೋರ್ವನಿಗೆ ದೇವಿ ಕನಸಲ್ಲಿ ಬಂದು ಒಂದು ದೇವಾಲಯ ಕಟ್ಟಿ ಅನ್ನದಾನ ಮಾಡಿದರೆ ಆತನಿಗೆ ಶ್ರೇಯಸ್ಸಗುವುದೆಂದು ವರವಿಟ್ಟ ಕಾಣಿಕೆಯೇ ಈ ದೇವಾಲಯ. ಈ ದೇವಾಲಯದಲ್ಲಿನ ಅಮ್ಮನ ಮೂರ್ತಿ ಬಹಳ ಸುಂದರವಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಪ್ರಸನ್ನಗಣಪತಿ, ವೀರಾಂಜನೇಯರಿಗೆಲ್ಲ ಮಂಗಳಾರತಿಯಾದ ಬಳಿಕ ದೇವಿಗೆ ಮಹಾ ಮಂಗಳಾರತಿ. ಭಜನಾಪ್ರಿಯರು ಸದಾಕಾಲ ಭಜನೆಗಳನ್ನು ಹಾಡಲು ಅವಕಾಶವಿದೆ. ತದನಂತರ ಪ್ರಸಾದ ವಿನಿಯೋಗ. ಭೋಜನ ಶಾಲೆಯಂತು ಬಹಳ ಸ್ವಚ್ಛವಾಗಿಟ್ಟಿದ್ದಾರೆ. ದೇವಾಲಯದ ಸುತ್ತಲೂ ಜಾನವಾರುಗಳನ್ನು ಸಾಕಿದ್ದಾರೆ. ಜಿಂಕೆಗಳು, ಮೊಲಗಳು, ಪಾರಿವಾಳಗಳು, ಕುದುರೆ, ಆನೆಗಳನ್ನೂ ಸಾಕಿದ್ದರೆ. ದೇವಸ್ಥಾನದ ಆವರಣದಲ್ಲೇ ಆಂಜನೇಯಸ್ವಾಮಿ ಸಂಜೀವಿನಿ ಪರ್ವತ ಎತ್ತಿಹಿಡಿದಿರುವ ಬೃಹತ್ ಮೂರ್ತಿ ಇದೆ.

ಈ ದೇವಸ್ಥಾನದಿಂದ ಹೊರಟು ಅಲಂಗಾರಿಗೆ ವಾಪಸ್ ಬಂದು ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಹೊರಟೆವು. ಅಲಂಗಾರಿನಿಂದ 2 ಕಿಮಿ ನಲ್ಲಿ ಮೂಡುಬಿದಿರಿ ಸೇರಬಹುದು, ಮೂಡುಬಿದಿರೆ ನೋಡುವ ಮುನ್ನ ಇದ್ದ ಕಲ್ಪನೆಯೇ ಬೇರೆಯಾಗಿತ್ತು. ಮೂಡುಬಿದಿರೆ ಬಸದಿ ಪ್ರಾಯಶ: ಸಾವಿರ ಕಂಬಗಳಿರುವುದರಿಂದ ಅತಿ ದೊಡ್ಡ ಬಸದಿ ಇರಬಹುದೆಂದು ಭಾವಿಸಿದ್ದೆ. ನಂತರವೇ ತಿಳಿದದ್ದು - ಒಟ್ಟು ಮೂರು ನೆಲೆಗಳಲ್ಲಿರುವ ದೊಡ್ಡ ಕಂಬಗಳು ಅವುಗಳಿಗೆ ಅಲಂಕಾರಕ್ಕಾಗಿ ಆಧಾರಕ್ಕಾಗಿ ಜೋಡಿಸಲಾದ ಚಿಕ್ಕ ಕಂಬಗಳನ್ನೆಲ್ಲಾ ಸೇರಿಸಿದರೆ ೧೦೦೦ ಕಂಬಗಳಿವೆಯೆಂದು. ರಚನೆಯಲ್ಲಿ ನೇಪಾಳಿ ವಿನ್ಯಾಸದಲ್ಲಿ ಕ್ರಿ.ಶ. 1430 ನಿರ್ಮಿತವಾದ ಈ ಬಸದಿಯನ್ನು ಹೊಸಬಸದಿ ಎಂದಾಗಿ, ಶ್ರೀ ಚಂದ್ರನಾಥಸ್ವಾಮಿಯು ಆರಾದನೆಗೊಳ್ಳೊವುದರಿಂದ ಚಂದ್ರನಾಥ ಸ್ವಾಮಿ ಬಸದಿ ಎಂದೂ ಕರೆಯುತ್ತಾರೆ. ದಕ್ಷಿಣಕಾಶಿ ಎಂದೆನಿಸಿಕೊಂಡ ಮೂಡುಬಿದಿರೆಯಲ್ಲಿ ಮತ್ತೂ ಕೆಲವು ಬಸದಿಗಳಿವೆ. ಭೈರಾದೇವಿ ಮಂಟಪದಲ್ಲಿನ ಒಂದೆರಡು ಕಂಬಗಳ ಚಿತ್ರಗಳನ್ನು ಜೋಡಿಸಿದ್ದೇನೆ.



ಅಲ್ಲಿಂದ ಡಾ|| ಮೋಹನ್ ಆಳ್ವರ ನೇತೃತ್ವದಲ್ಲಿ ಪ್ರತಿ ವರ್ಷವೂ ನಡೆಯುವ ಆಳ್ವಾಸ್ ವಿರಾಸತ್ ಗೆ ಹೊರಟೆವು. ವಿರಾಸತ್ ನಡೆಯುವುದು ಮಿಜಾರ್ ಎಂಬ ಊರಲ್ಲಿ. ಇದು ಮೂಡುಬಿದಿರೆಯಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿದೆ. ವಿರಾಸತ್ ನಡೆಯುವ ಈ ಸಭಾ ಸ್ಥಳದ ಹೆಸರು ಶೋಭಾವನ. ಶೋಭಾವನದ ಒಳಗೆ ಬರುವಾಗಲೇ ತಂಪಾದ ಆಯುರ್ವೇದಿ ಗಿಡ ಮೂಲಿಕೆಗಳ ತೋಟವೊಂದು ಕೈಬೀಸಿ ಕರೆಯುತ್ತದೆ. ಈ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಮನೆ ಮದ್ದಿನ ಸಸ್ಯಗಳ ತೋಟವಿದೆ. ಪ್ರತಿಯೊಂದು ಸಸ್ಯದ ಆರೋಗ್ಯ ಮೌಲಯವನ್ನು ಅಲ್ಲಿ ತಿಳಿಸಲಾಗಿದೆ. ಡಾ ಆಳ್ವರು ಆಯುರ್ವೇದ ವೈದ್ಯರಾದ್ದರಿಂದ ಇಂತಹ ಒಂದು ಸಸ್ಯ ತೋಟದ ಹೊಸಪ್ರಯೋಗ ಅಷ್ಟು ಕಷ್ಟ ಆಗಿರಲಿಕ್ಕೆ ಇಲ್ಲ. ಶೋಭಾವನದ ಈ ಸಸ್ಯ ತೋಟ ವರ್ಷಾವಧಿಯೂ ಪ್ರವೇಶಕ್ಕಿರುವುದಿಲ್ಲ. ಆಲ್ವಾಸ್ ನುಡಿಸಿರಿ, ವಿರಾಸತ್, ನಡೆಯುವ ಸಂದರ್ಭದಲ್ಲಿ ಮಾತ್ರ ತೆರೆದಿರುತ್ತದೆ.

ಟ್ರಿಪ್ ದಿನಾಂಕ - 10th Jan 2009
ಟ್ರಿಪ್ ಮೀಟರ್ - 71 ಕಿ ಮೀ
ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಜೋಡುಕಟ್ಟೆ (31)- ಅತ್ತೂರು ಚರ್ಚ್ (33)- ಅಲಂಗಾರ್ (50)- ಕೊಡ್ಯಡ್ಕ (55)- ಅಲಂಗಾರ್ (60)- ಮೂಡುಬಿದಿರೆ (62)- ಮಿಜಾರ್ (71)

ಮಣಿಪಾಲದಿಂದ ಮೂಡುಬಿದಿರೆಯವರೆಗೂ ರಸ್ತೆ ಬಹಳ ಚೆನ್ನಗಿದೆ. ಭಾನುವಾರದಂದು ಗಾಡಿ ಓಡಿಸಲು ಮಜಾ ಬರುತ್ತದೆ....ಏಕೆಂದರೆ ರಸ್ತೆ ಪೂರ್ಣ ನಮ್ಮಂತಹ ಹವ್ಯಾಸಿ ಪಯಣಿಗರಿಗೆ ಮಾತ್ರ ;-) ಕಾರ್ಕಳದಲ್ಲಿ, ಮೂಡುಬಿದಿರೆಯಲ್ಲಿ ಒಳ್ಳೆಯ ಹೊಟೆಲುಗಳಿವೆ.


ನಿಮಗಿನ್ನು ಶುಭ ಪ್ರಯಾಣ ಕೋರುವ,


ಪ್ರಕೊಪ
ಪ್ರವೀಣ್ ಪಟವರ್ಧನ್