Saturday, April 18, 2009

ಕೆಮ್ಮಣ್ಣಗುಂಡಿಯ ಪ್ರವಾಸ











Shringeri -Observe no one at all near the temple. Snap taken at around 6:30am.
















Kudremukha Sholay Forests

Tea estates

















Sirimane falls / Kigga Falls




















The view from Z point










Sunrise @ the Z point- LtoR Viji, Rajesh, Pachchi, PrAKoPa, Vinni, Raj


View from Dattapeetha











View from Mullaiyanagiri peak
















Mullayanagiri - Highest peak









Hanumangundi Falls (Sootanabbi falls)












Kadambi Falls, on the way to Kudremukha













Sunrise at the Z-point, Kemmannagundi






ಎಲ್ಲರಿಗೂ ನಮಸ್ಕಾರ.

ಕುಪ್ಪಳ್ಳಿ ಪ್ರವಾಸದ ಬೆನ್ನಿನಲ್ಲೇ ಮತ್ತೊಂದು ಪ್ರವಾಸ ನಡೆದುಹೋಯಿತು. ಶುಭ ಶುಕ್ರವಾರ, ಶನಿವಾರ, ಭಾನುವಾರ ದ ರಜೆಯನ್ನು ಹೇಗೆ ಕಳೆಯಬೇಕೆಂದು ಚಿಂತಿಸುತ್ತಿರುವಾಗಲೇ ಪ್ರವೀಣ್ ಗೋರೆ ಮಡಿಕೇರಿ ಜಿಲ್ಲೆಯ ತಡಿಯಂಡಮೋಲ್ ಚಾರಣವನ್ನು ಸೂಚಿಸಿದರು. ಕಾರಣಾಂತರಗಳಿಂದಾಗಿ ಈ Trek ನಮಗೆ ಆಗಿಬರುವಂತೆ ಕಾಣಲಿಲ್ಲ. ಪ್ರಶಾಂತ್ (ಪಚ್ಚಿ) ಹಾಗು ನಾನು ಹೊಸಜಾಗಗಳನ್ನು ಹುಡುಕುತ್ತಿರುವಾಗಲೇ "ಕೆಮ್ಮಣ್ಣುಗುಂಡಿ!!" ಎಂದು ಒಕ್ಕೊರಲಿನಿಂದ ಕೂಗಿದೆವು. ನಮ್ಮ ದ್ವಿಚಕ್ರವಾಹನದಲ್ಲಿ ಕೆಮ್ಮಣ್ಣಗುಂಡಿಗೆ ಹೋಗುವ ಮಾನಸಿಕ ತಯಾರಿಯನ್ನು ಇಬ್ಬರೂ ಆ ಕ್ಷಣದಿಂದಲೇ ಆರಂಭಿಸಿದ್ದೆವು. ಹಾಗೆ ನಮ್ಮನ್ನು ಸೇರಲಿಚ್ಛಿಸಿದವರು ವಿನಯ್, ವಿಜಯ್, ರಾಜೇಶ್, ರಾಜ್ ಕಮಲ್. plan ಮಾಡಲಾರಂಭಿದೆವು. ಅರ್ಧ ಮುಕ್ಕಾಲು ಗಂಟೆಯೊಳಗೆ blue print ನಮ್ಮ ಮುಂದಿತ್ತು. ಆ ಪ್ರಕಾರವಾಗಿ, ಮಣಿಪಾಲದಿಂದ ಚಾರ್ಮಾಡಿ ಘಾಟ್ ಮಾರ್ಗವಾಗಿ ಮೂಡಿಗೆರೆ, ಚಿಕ್ಕಮಗಳೂರು ಸೇರಿ ಅಲ್ಲಿಂದ ಮುಳ್ಳಯ್ಯನಗಿರಿ, ದೇವಿರಾಮನ ಬೆಟ್ಟ, ಮಾಣಿಕ್ಯಧಾರ, ದತ್ತಪೀಠ, ವೀಕ್ಷಿಸಿ, ಕೆಮ್ಮಣ್ಣುಗುಂಡಿಯ ಲಾಡ್ಜ್ ನಲ್ಲಿ ತಂಗಿ ಮಾರನೆಯ ಬೆಳಿಗ್ಗೆ ಜ಼ೆಡ್ ಪಾಯಿಂಟ್, ಹೆಬ್ಬೆ ಜಲಪಾತ, ಕಲ್ಹತ್ತಿ ಜಲಪಾತ ಗಳಲ್ಲಿ ಬಿದ್ದು ಹೊರಳಾಡಿ ಮತ್ತೆ ಚಿಕ್ಕಮಗಳೂರು, ಮೂಡಿಗೆರೆ ಚಾರ್ಮಾಡಿ ಮಾರ್ಗವಾಗಿ ಮನೆತಲುಪುವುದೆಂದು. ಈ plan ಒಂದೂವರೆ ದಿನದ ಪ್ರವಾಸವೆನಿಸುತ್ತಿತ್ತು.

ಕೇಳೋಕ್ಕೆ ಚೆನ್ನಾಗಿದೆ ಅನುಷ್ಠಾನಕ್ಕೆ ತರಲು ಹೆಣಗಬೇಕಾಗಬಹುದು ಎಂಬುದೂ ನಮ್ಮ ಮಸ್ತಕಕ್ಕೆ ಹೊಳೆಯದಂತಾಯಿತು. ಗಾಡಿಗಳೆಲ್ಲಾ ರೆಡಿಯಾದವು ೪೦೦ ಕಿ ಮಿ ನ ಎರಡು ದಿನದ ಆ ಯಾತ್ರೆಗೆ. ಪೆಟ್ರೋಲ್ ತುಂಬಿಸಿ, Tyreಗಳಲ್ಲಿ ಗಾಳಿ ಪರೀಕ್ಷಿಸಿಕೊಂಡು, Break- Gear ಗಳನ್ನು ಸ್ವ-ಪ್ರಯೋಗಿಸಿಕೊಂಡು ಬೆಳಗಿನಜಾವ ಆರು ಗಂಟೆಗೆ ಹೊರಟವು 6 ಗಾಡಿಗಳು. ಹೋಟೆಲ್ ಒಂದರಲ್ಲಿ ಬಿಸಿ ಬಿಸಿ ಚಹಾ ಹೀರುತ್ತಿರುವಾಗಲೇ ಅಲ್ಲಿಗೆ ದೇವರಂತೆ ಬಂದವನು ಕಿರಣ್ ದಾಮ್ಲೆ. ಆತ ಬಿತ್ತರಿಸಿದ ವಾರ್ತೆ ನಮ್ಮ ಪ್ರವಾಸಕ್ಕೆ ತಡೆಯೊಡ್ಡುವಂತ್ತಿತ್ತು. ಕಿರಣ್ ಆಗ ಹೇಳಿದ್ದು "ಚಾರ್ಮಾಡಿ ಘಾಟನ್ನು ನವೀಕರಿಸುತ್ತಿದ್ದಾರೆ. ಸೈಕಲ್ಲನ್ನು ಸಹ ಆ ರಸ್ತೆಯಲ್ಲಿ ಬಿಡುತ್ತಿಲ್ಲ"ಎಂದು. ಅವನೊಟ್ಟಿಗೇ ಅನ್ಯ ಮಾರ್ಗದ ಸಾಧ್ಯತೆಯನ್ನು ಹುಡುಕುತ್ತಿರುವಾಗ ದಕ್ಕಿದ ಮಾರ್ಗವೇ.....
Trip date: 9th April - 11th April



Place (distance in km)
ಮಣಿಪಾಲ (0)- ಕಾರ್ಕಳ(34) - ಬಜಗೋಳಿ (43)- ಮಾಳ ಘಾಟ್(50) - ಶೃಂಗೇರಿ (99)- ಜಯಪುರ (120)- ಬಾಳೆಹೊನ್ನೂರು (136)- ಆಲ್ದೂರು (167)- ಚಿಕ್ಕಮಗಳೂರು (186)- ಕೆಮ್ಮಣ್ಣಗುಂಡಿ (250) - ಲಿಂಗದಹಳ್ಳಿ (270)

ಮಣಿಪಾಲದಿಂದ ಬಜಗೋಳಿಯವರೆಗಿನ ಪ್ರಯಾಣ ಸಾಕಷ್ಟು ಬಾರಿ ಕೊರೆದಿರುವೆನಾದ್ದರಿಂದ, ಅಲ್ಲಿಂದ ಮುಂದಿನ ಪ್ರ(ಯಾ)ವಾಸದ ಬಗ್ಗೆ ಗಮನ ಹರಿಸುತ್ತೇನೆ. ಮಾಳ/ಕುದುರೇಮುಖ ಘಾಟಿನ ಲಕ್ಷಣಗಳೆಂದರೆ ದಾರಿಯ ಇಕ್ಕೆಲಗಳಲ್ಲಿನ ದಟ್ಟವಾದ ಕಾಡು ಹೆಚ್ಚು ತಿರುವುಮುರುವಾಗಿರದ ಅಗಲವಾದ ರಸ್ತೆ. ಮಳೆಗಾಲದಲ್ಲಿ ಅಲ್ಲಲ್ಲಿ ಹುಟ್ಟಿಕೊಳ್ಳುವಂತಹ ಪುಟ್ಟ ಪುಟ್ಟ ಜಲಪಾತಗಳು, ಹಾವು-ಮುಂಗೂಸಿಗಳು ಆಗಾಗ ನಿಮ್ಮ ಹಾದಿಯ ನಡುವೆ ಬಂದು ನಿಮ್ಮನ್ನು ಭಯಗೊಳಿಸುವುದು. ಮಾಳ ಚೆಕ್ ಪೋಸ್ಟಿನಿಂದ ಶೃಂಗೇರಿಯ ಕಡೆಗೆ ಹೊರಡಬೇಕು. ಕೆರೆಕಟ್ಟೆಯೆಂಬ ಊರಿನ ಬಳಿ ನಿಮಗೆ ಶೃಂಗೇರಿಯ ಕಡೆಗೆ ಒಂದು ರಸ್ತೆ ಹೋಗುತ್ತದೆ. ಮತ್ತೊಂದು ಸೂತನಬ್ಬಿ ಜಲಪಾತ (ಹನುಮಾನ್ ಗುಂಡಿ ಅಂತಲೂ ಕರೆಯುತ್ತಾರೆ) ಕುದುರೇಮುಖದ ಊರುಗಳಿಗೆ ಕರೆದೊಯ್ಯುತ್ತದೆ. ಮಾಳ ಚೆಕ್ ಪೋಸ್ಟ್ ನಿಂದ ಸೂತನಬ್ಬಿಗೆ 17 ಕಿ.ಮಿ.. ರಸ್ತೆಯಿಂದ ಸುಮಾರು 1oo ಮೆಟ್ಟಿಲು ಕೆಳಗಿಳಿದರೆ ನಿಮಗೆ ಮನಮೋಹಕ ಜಲಪಾತ ಕಾಣಸಿಗುತ್ತದೆ. ಸದಾ ಕಾಲ ಕೊರೆಯುವ ನೀರು (ನಾನು ಛಳಿಗಾಲದಲ್ಲೂ ಇಲ್ಲಿಗೆ ಬಂದಿದ್ದೇನೆ. ಬೇಸಿಗೆಯಲ್ಲೂ ಬಂದಿದ್ದೇನೆ) ಬೇಸಿಗೆಯಲ್ಲಿ ನೀರು ತಣ್ಣಗಿದ್ದರೆ ಚಳಿಗಾಲದಲ್ಲಿ ವಿಪರೀತ ತಣ್ಣಗಿರುತ್ತದೆ. ನೀರಿಗೆ ಇಳಿದ ಕ್ಷಣದಿಂದ ನಡುಕ ಆರಂಭವಾಗುತ್ತದೆ. ಹಲ್ಲುಗಳು ಕಟ ಕಟ ಒಂದಕ್ಕೊಂದು ಬಡಿದುಕೊಳ್ಳಲಾರಂಭಿಸುತ್ತದೆ.ಸುಮಾರು ನೂರಡಿಯ ಎತ್ತರದಿಂದ ಧುಮ್ಮಿಕ್ಕುವ ಈ ಜಲಪಾತ ಕಾಡಿನ ನಡುವೆ ಇದೆ. ಮಳೆಗಾಲದಲ್ಲಿ ಇಮ್ಮಳಗಳ (ಜಿಗಣೆಗಳ) ಭಯ ತರಿಸುತ್ತದೆ. ಇಲ್ಲಿಂದ ಮುಂದೆ ಸಾಗಿದರೆ ಪುಟ್ಟದೊಂದು ಜಲಪಾತ ಸಿಗುತ್ತದೆ. ಇದು ಕದಂಬಿ ಜಲಪಾತ. ಹೆಚ್ಚೇನು ಆಳವಿರದ ಕಾರಣ ಇಲ್ಲಿನ ಗುಂಡಿಗೆ ಇಳಿಯುವುದು ಅಷ್ಟೇನೂ ಸಾಹಸಮಯವಲ್ಲ. ಇಲ್ಲಿಂದ ಕುದುರೆಮುಖಕ್ಕೆ 15ಕಿ.ಮಿ. ಈ ಹಾದಿಯಲ್ಲಿ ಕುದುರೆಮುಖದವರೆಗೂ ಇಂಚು ಇಂಚಿಗೆ ಗಾಡಿ ನಿಲ್ಲಿಸಿ ಛಾಯಚಿತ್ರಗಳನ್ನು ತೆಗೆಯಬೇಕೆಂಬ ಹಂಬಲ ಹೆಚ್ಚಾಗುತ್ತದೆ. ಗಾಡಿ ಓಡಿಸುವವರಿಗೆ ಗಾಡಿ ಓಡಿಸುವ ಖುಷಿ ಒಂದೆಡೆಯಾದರೆ ಸುತ್ತಲಿನ ಪರಿಸರವನ್ನು ನೋಡಲಾಗದೆಂಬ/ಅನುಭವಿಸಲಾಗದೆಂಬ ಅಸೂಯೆ ಮತ್ತೊಂದೆಡೆ,

ಮುಂಚೆಯೆ ಹೇಳಿದಂತೆ ಶೃಂಗೇರಿಯತ್ತ ಹೊರಟಿದ್ದ ನಾವು ಕುದುರೆಮುಖದ ರಮ್ಯ ದೃಶ್ಯವನ್ನು ಕೈಬಿಡಬೇಕಾಗಿತು. ಶೃಂಗೇರಿಯಲ್ಲಿ ಬೆಳಗಿನ ತಿಂಡಿ ಮುಗಿಸಿಕೊಂಡು ಜಯಪುರ - ಬಾಳೆಹೊನ್ನೂರು ಮಾರ್ಗವಾಗಿ ಚಿಕ್ಕಮಗಳೂರಿಗೆ ಹೊರಟೆವು. ಬಾಳೆಹೊನ್ನೂರಿನಿಂದ ಚಿಕ್ಕಮಗಳೂರಿನ ವರೆಗೂ ಚಹಾ /ಕಾಫಿ ಎಸ್ಟೇಟುಗಳು. ಬೇಸಿಗೆಯಲ್ಲೂ ತಂಪಾಗಿಸುತ್ತಿತ್ತು ಆ ಎಸ್ಟೇಟುಗಳು. ಚಿಕ್ಕಮಗಳೂರಿನಲ್ಲಿ ಬೇಸಿಗೆಕಾಲವೇ ಇಲ್ಲವೇನೋ ಎಂಬ ಭಾವನೆ ಆ ತಂಪಾದ ವಾತಾವರಣ ಪರಿಪರಿಯಾಗಿ ಹೇಳುತ್ತಿತ್ತು. ತಿರುವುಗಳಿಂದ ಕೂಡಿರುವ ರಸ್ತೆಗಳು ಗಾಡಿ ಚಾಲಕರಿಗೆ ಮಜ ನೀಡುವುದರಲ್ಲಿ ಸಂದೇಹವೇ ಇಲ್ಲ. ಚಿಕ್ಕಮಗಳೂರಿನಲ್ಲಿ ಊಟೋಪಚಾರ ಮುಗಿಸಿ ಮಧ್ಯಾಹ್ನ ಚಾರಣಕ್ಕೆ ಮುಂದಾದೆವು,

ಮುಳ್ಳಯ್ಯನಗಿರಿ ಶಿಖರ ಕರ್ನಾಟಕ ರಾಜ್ಯದ ಅತಿ ಎತ್ತರದ ಶಿಖರ. ಇದು ಸಮುದ್ರ ಮಟ್ಟಕಿಂತ 6117ಅಡಿ ಎತ್ತರದಲ್ಲಿದೆ. ಶಿಖರದ ತುದಿಗೆ ತಲುಪಲು ಸುಮಾರು 505 ಮೆಟ್ಟಿಲುಗಳಿವೆ. ಚಾರಣಕ್ಕೆ ಹೇಳಿಮಾಡಿಸಿದ ಸ್ಥಳ. ಗಾಡಿಯಲ್ಲಿ ಬರುವವರಿಗೂ ಕಠಿಣ ಸವಾಲು ಒಡ್ಡುತ್ತದೆ. 505 ಮೆಟ್ಟಿಲುಗಳನ್ನೇರಿ ಮುಳ್ಳಯ್ಯನೆಂಬ ಸಿದ್ಧನೋರ್ವನ ದೇಗುಲದ ದರ್ಶನ ಪಡೆಯಬಹುದು. ಹಿಪ್ಪನಹಳ್ಳಿಯ ಎಸ್ಟೇಟ್ ಮಾಲೀಕರು ಈ ದೇವಸ್ಥಾನದ ಪೂರ್ಣ ಖರ್ಚನ್ನು ವಹಿಸಿಕೊಂಡಿದ್ದಾರೆ. ದೇವಸ್ಥಾನ ಕಟ್ಟಲು ಬೇಕಾದ್ದ ಸಾಮಗ್ರಿಗಳನ್ನು ಕತ್ತೆಗಳ ಸಹಾಯದಿಂದ ತರುತ್ತಾರೆ. ಈ ಶಿಖರದ ತುದಿಯಲ್ಲಿ ನಿಂತು ಸುತ್ತಮುತ್ತಲಿನ ನಿಸರ್ಗ ನೋಡಲು ಎರಡು ಕಣ್ಣುಗಳು ಸಾಲದು. ಸದಾ ಕಾಲ ತಂಪು ಗಾಳಿ ಬೀಸುವ ಇಲ್ಲಿಗೆ ಮಳೆಗಾಲದಲ್ಲಿ ಬರಲು ಅತಿ ಕಠಿಣವಾದ ಕಾಯಕ. ಪ್ರತ್ಯಕ್ಷ ಸಾಕ್ಷಿ ಪಚ್ಚಿ ಹೇಳುವುದು ಹೀಗೆ. "....ಗಾಡಿ ನಿಲ್ಲಿಸಿದ್ವಿ. ಗಾಳಿಗೆ ಗಾಡಿ ಎಲ್ಲಿ ಹಾರಿಹೋಗತ್ತೋ ಅಂತ ಗೊತ್ತಗುತ್ತಿರಲಿಲ್ಲ. ಆ ಮಟ್ಟಕ್ಕೆ ಗಾಳಿ...." ಮತ್ತೊಂದು ಸಾಕ್ಷಿ ಸೌಮ್ಯಶ್ರೀ ಹೇಳಿದ್ದು ".... ನನ್ನ ಗೆಳೆಯರನ್ನ ಮಳೆಗಾಲದಲ್ಲಿ ಕರೆದುಕೊಂಡು ಹೋಗಿದ್ದೆ. ಅಲ್ಲಿ ೫೦೦ ಮೆಟ್ಟಿಲು ಹತ್ತಿ ಹೋದರೆ ಅದೇ ಮುಳ್ಳಯ್ಯನಗಿರಿ ಅಂತ ಹೇಳಿದರೇ ಯರೂ ನಂಬಲೇ ಇಲ್ಲ..."

ಅಲ್ಲಿಂದ ವಾಪಸ್ ಹೋಗುವ ದಾರಿಯಲ್ಲಿ ಸೀತಾಳಯ್ಯನ ಮಠವಿದೆ. ಇಲ್ಲಿಂದ ಮುಂದೆ ನಾವು ಸಾಗಿದ್ದು ದತ್ತಪೀಠಕ್ಕೆ. ಇದನ್ನು ಮುಸಲ್ಮಾನರು ಬಾಬಾ ಬುಡನ್ ಗಿರಿ ಅಂತ ಹೆಸರಿಟ್ಟಿದ್ದಾರೆ, ಇಲ್ಲಿಯ ದತ್ತಾತ್ರೇಯ ದೇವಸ್ಥಾನಕ್ಕಾಗಲಿ, ದಾದಾ ಹಾಯತ್ ಖಾಲಂದರ್ ಗೋರಿಗಾಗಲಿ ಹೋಗಲು ನಿಷೇಧವಿದೆ. ದೂರದಿಂದಲೇ ನೋಡಿ ನಿಮ್ಮ ನಿಮ್ಮ ಪ್ರಾರ್ಥನೆಗಳನ್ನು ಸಲ್ಲಿಸಬೇಕು. ಇಲ್ಲಿಂದ ಮಾಣಿಕ್ಯಧಾರ, ಗಳಿಕೆರೆ ಅಬ್ಬಿಗಳು ಬಹಳ ಹತ್ತಿರ- ಸುಮಾರು ಐದಾರು ಕಿ.ಮಿ. ಇಲ್ಲಿ ಸದಾ ಕೊರೆಯುವ ನೀರು ನಿಮ್ಮನ್ನು ರಂಜಿಸುತ್ತವೆ, ದತ್ತಪೀಠಕ್ಕೆ ಬರುವ ಮುಂಚೆಯೇ ಅತ್ತಿಗುಂಡಿಯಲ್ಲೊಂದು ಚಿಕ್ಕ ಜಲಪಾತವಿದೆ. ಇಲ್ಲಿಯೇ ನಾವೆಲ್ಲರೂ ನೇರಳೆ ಹಣ್ಣುಗಳನ್ನು ಮೆದ್ದೆವು.

ದತ್ತಪೀಠದಿಂದ ಕೆಮ್ಮಣ್ಣಗುಂಡಿಗೆ 32 ಕಿ ಮಿ. ಅತ್ತಿಗುಂಡಿಯಿಂದ ಒಂದೆ ರಸ್ತೆ ದತ್ತಪೀಠಕ್ಕೆ, ಮತ್ತೊಂದು ಕೆಮ್ಮಣ್ಣಗುಂಡಿಗೆ ಹೋಗಲು ಇಬ್ಭಾಗವಾಗುತ್ತದೆ. ದತ್ತಪೀಠದಿಂದ ಕೆಮ್ಮಣ್ಣಗುಂಡಿಯ ರಸ್ತೆ ತೀರ ಹದಗೆಟ್ಟಿದೆ. 5 ಮೀಟರ್ ಅಗಲ ವಿರುವ ರಸ್ತೆಯಲ್ಲಿ ಎದುರಿನಿಂದ ಲಾರಿ ಬಂದಾಗ ಕಾರಿನಲ್ಲಿರುವ ನೀವು ಕಂಗಾಲಾಗಬೇಡಿ. ಕಾಡಿನ ಮಧ್ಯದಲ್ಲಿನ ಈ ರಸ್ತೆಯ ಎರಡು ಕಡೆಯಲ್ಲೂ ರಮ್ಯ ದೃಶ್ಯಗಳು ಕಾಣಸಿಗುತ್ತವೆ. ಭದ್ರಾ ಅಭಯಾರಣ್ಯದ ಬೋರ್ಡ್ ನೋಡಿದಾಗಲೆಲ್ಲಾ, ನೀವೊಬ್ಬರೇ ಆ ರಸ್ತೆಯಲ್ಲಿದ್ದಾಗ ಹೆದರಿಕೆಯಾಗದಿದ್ದರೆ " YOU ARE THE MAN!!!"

ಕೆಮ್ಮಣ್ಣಗುಂಡಿ ಸೇರುವ ಹೊತ್ತಿಗೆ ಸಂಜೆ ಎಂಟಾಗಿತ್ತು. ಬಂದ ರಸ್ತೆಯ ಪರಿಣಾಮವಾಗಿ ನಮ್ಮ ಗಾಡಿಗಳೂ ಇನ್ನೂ ಒಳ್ಳೆಯ condition ನಲ್ಲಿವೆಯೇ ಎಂದು ಖಾತ್ರಿ ಮಾಡಿಕೊಂಡೆವು. ಕೆಮ್ಮಣ್ಣಗುಂಡಿ ಒಂದು ಪೇಟೆ ಎಂದು ಭಾವಿಸಿದ್ದ ನಮಗೆ ಅದು ಸುಳ್ಳೆಂದು ಅರಿವಾಯಿತು. ಇಡಿಯ ಕೆಮ್ಮಣ್ಣಗುಂಡಿಯಲ್ಲಿ ನಿಮಗೆ ತಂಗಲು ಸಿಗಬಹುದಾದ ಲಾಡ್ಜ್ ಗಳೆಂದರೆ ಎರಡು ಐ.ಬಿ, ಒಂದೆರೆಡು ಟಿ.ಬಿ., ಒಂದು ಡಾರ್ಮಿಟರಿ, ಒಂದು ರಾಜ್ ಭವನ. ಎಲ್ಲವೂ ಸರ್ಕಾರಿ ಸ್ವಾಮ್ಯಕ್ಕೆ ಒಳಪಟ್ಟಿರುವವು. ಯಾವುದರಲ್ಲಿಯಾದರೂ ತಂಗಬೇಕಾದರೆ ತಿಂಗಳುಗಳ ಹಿಂದೆಯೇ Booking ಮಾಡಿರಬೇಕು. 3 ತಿಂಗಳ ಹಿಂದೆ ಬುಕ್ ಮಾಡಿದ ರಾಜ್ ಭವನ್ ಸಹಿತ ಕೆಲವೊಮ್ಮೆ ಸಿಗದೇ ಹೋಗಬಹುದು. ಆದ್ದರಿಂದ ಕೆಮ್ಮಣ್ಣಗುಂಡಿಯಲ್ಲಿ ತಂಗುವ plan ನೀವು ಅಲ್ಲಿಗೆ ಬರುವ ಮುಂಚೆಯೇ ಖಾತ್ರಿ ಮಾಡಿಕೊಳ್ಳಬೇಕಾಗುತ್ತದೆ. ಇಲ್ಲಿ ಇತರೇ ಹೊಟೆಲುಗಳೂ ಇಲ್ಲ. ಅಲ್ಲಲ್ಲಿ ಪೆಟ್ಟಿಗೆ ಅಂಗಡಿಗಳು; ಒಂದೇ ಹೊಟೆಲು (ಐ.ಬಿ ಟಿ.ಬಿ ಗಳಿಗೆ ಸಂಬಂಧ ಪಟ್ಟಿದ್ದು) ಕೆಮ್ಮಣ್ಣಗುಂಡಿಗೆ ತಲುಪುವುದೇ ತಡವಾದರೆ ಆ ದಿನ ನಿಮ್ಮ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗಟ್ಟಿ. ಇಲ್ಲದಿದ್ದರೆ ಲಿಂಗದಹಳ್ಳಿ(20km) ಅಥವಾ ತರೀಕೆರೆ (36km) ಅಥವಾ ಚಿಕ್ಕಮಗಳೂರಿಗೇ ಹೋಗಬೇಕಾಗುತ್ತದೆ. ನಮಗೂ ಇವೆಲ್ಲದರ ಮಾಹಿತಿ ಅಲ್ಲಿಗೆ ಹೋದಾಗಲೇ ತಿಳಿದದ್ದು. ಕಡೆಗಂತೂ ಕೈಕಾಲು ಹಿಡಿದಿದ್ದಕ್ಕೆ ಡಾರ್ಮಿಟರಿಯಲ್ಲಿ ಒಂದು ಕೋಣೆ ದೊರೆಯಿತು. ಆರು ಜನರಿಗೆ ನಾಲ್ಕು ಹಾಸಿಗೆ ಸಿಕ್ಕಿತು. ಆದಿನ ನೆಮ್ಮದಿಯಿಂದ ಊಟಮಾಡಿ ಮಲಗಿದೆವು. ಮಾರನೆಯ ದಿನದಂದು ಸೂರ್ಯೋದಯ ನೋಡಲು Z-pointಗೆ (ನಮ್ಮ ಡಾರ್ಮಿಟರಿಯಿಂದ 3ಕಿ.ಮಿ) ಅಥವಾ ಹೆಬ್ಬೆ ಜಲಪಾತ ನೋಡಲು 6 ಕಿ.ಮಿ ಚಾರಣ. ಇವೆರಡರಲ್ಲಿ ಆಯ್ಕೆ ಮಾಡಿಕೊಳ್ಳಬೇಕಿತ್ತು. ಏಕೆಂದರೆ ನಮ್ಮಲ್ಲಿ ಸಮಯ ಅಷ್ಟಿರಲಿಲ್ಲ. ಕಡೆಗೆ ಬೆಳಗಿನ ಜಾವ ೫:೦೦ ಗಂಟೆಗೆ Z point ಚಾರಣವೆಂದು ನಿರ್ಧಾರವಾಯಿತು. ಅತಿಸುಂದರವಾದ ಹೆಬ್ಬೆ ಜಲಪಾತವನ್ನು ಅನಿವಾರ್ಯ ಕಾರಣದಿಂದಾಗಿ ಕೈಬಿಡಬೇಕಾಯಿತು. ಹುಣ್ಣಿಮೆಯ ಬೆಳಕಿನಲ್ಲಿ ಕಾಡಿನ ನಡುವೆ ೩ ಕಿ.ಮಿ ನಡೆದು ಕರೆದುಕೊಂಡು ಹೋದವನು ಚರಣ್ ಎಂಬ ಕಾಫಿ ಎಸ್ಟೇಟ್ ನಲ್ಲಿ ಕೆಲಸ ಮಾಡುವ ಹುಡುಗ. ಇದುವರೆಗೂ ಸಾಕಷ್ಟು ಸೂರ್ಯಾಸ್ತಮಾನ ವನ್ನು ಕಂಡಿದ್ದೇನೆ. ಸೂರ್ಯೋದಯ ಕಂಡಿದ್ದು ನಾನು ಎಂಟನೆಯ ಕ್ಲಾಸಿನಲ್ಲಿದ್ದಾಗ- ಕನ್ಯಾಕುಮಾರಿಯಲ್ಲಿ. ತದನಂತರ ಸೂರ್ಯೋದಯವಾಗಿ ಗಳಿಗೆಗಳ ನಂತರ ನಿದ್ದೆಯಿಂದ ಏಳುವ ಸಂಪ್ರದಾಯ ಬೆಳೆಸಿಕೊಂಡುಬಿಟ್ಟಿದ್ದೆ. ಇಲ್ಲಿಂದ ಸೂರ್ಯೋದಯ ಬಹಳ ಸುಂದರವಾಗಿ ಕಾಣುತ್ತದೆ. ಉಗಮಕ್ಕೂ ಅರ್ಧ ಗಂಟೆ ಮುಂಚಿತವಾಗಿಯೇ ಅಲ್ಲಿ ಸೇರಿದ್ದೆವು. ಒಂದಷ್ಟು ಛಾಯಚಿತ್ರಗಳನ್ನು ಸೆರೆಗಿಳಿಸಿ, ಸೂರ್ಯ ಉಗಮವಾಗುವ ವಿಹಂಗಮ ದೃಶ್ಯವನ್ನು ಕಂಡೆವು. Z ಆಕಾರದಲ್ಲಿ ಇಲ್ಲಿಯ ರಸ್ತೆಯನ್ನು ಮಾಡಲಾದ್ದರಿಂದ ಈ ಹೆಸರು ಈ ಶಿಖರಕ್ಕೆ. ಪೂರ್ವದಲ್ಲಿ ಲಿಂಗದ ಹಳ್ಳಿ, ಪಶ್ಚಿಮದಲ್ಲಿ Mines ಪರ್ವತ ಉತ್ತರ, ದಕ್ಷಿಣದಲ್ಲಿ ಇತರೆ ದೊಡ್ಡ ದೊಡ್ಡ ಗುಡ್ಡ ಬೆಟ್ಟಗಳು, ದಟ್ಟವಾದ ಶೋಲೇ ಕಾಡುಗಳುಬೆಳಗ್ಗಿನ ಹೊತ್ತಿನಲ್ಲಿ ತುಂಬ ಸುಂದರವಾಗಿ ಕಾಣುತ್ತದೆ. ಮಹಾರಾಜರಾದ ಕೃಷ್ಣರಾಜ ವೊಡೆಯರ್ ತಮ್ಮ ಬೇಸಿಗೆಯನ್ನು ಕಳೆಯುವ ಸಲುವಾಗಿ ಇಲ್ಲಿಗೆ ಬರುತ್ತಿದ್ದರಂತೆ. ಆ ಕಾರಣದಿಂದಲೇ ಕೆಮ್ಮಣ್ಣಗುಂಡಿಗೆ ಕೆ ಆರ್ ಹಿಲ್ಸ್ ಎಂಬ ಹೆಸರೂ ಇದೆ. ತಣ್ಣಗೆ ಬೀಸುವ ಗಾಳಿ ನಿಮ್ಮನ್ನು ಅಲ್ಲಿಂದ ಎಲ್ಲಿಗೂ ಹೋಗುವುದೇ ಬೇಡವೆನ್ನುವಂತೆ ವಶೀಕರಿಸುತ್ತದೆ. ಇಲ್ಲಿಂದಲೇ ಸೂರ್ಯಾಸ್ತಮಾನ ದೃಶ್ಯವೂ ಸುಂದರವಾಗಿ ಕಾಣುತ್ತದೆಂದು ಹೇಳುತ್ತಾರಾದರೂ ನಾವದನ್ನು ವೀಕ್ಷಿಸಿರಲಿಲ್ಲ. ನಮ್ಮ ಮುಂದಿನ ಪ್ರಯಾಣದ ಅನುವಾಗಿ ನಾವು ಅಲ್ಲಿಂದ ಹೊರಡಬೇಕಾಯಿತು. ವಾಪಸ್ ಬರುವ ದಾರಿಯಲ್ಲೇ ಸುಮಾರು 30ಅಡಿ ಎತ್ತರ ದಿಂದ ಧುಮುಕುವ ಶಾಂತಿ ಜಲಪಾತದಲ್ಲೂ ಸ್ವಲ್ಪ ಕಾಲ ಕಳೆದೆವು. ಮಳೆಗಾಲದಲ್ಲಿ ಇಂತಹ ಸುಮಾರು ಜಲಪಾತಗಳು ನಮಗೆ ದೊರಕುವವು ಎಂದು ಚರಣ್ ಆಗಾಗ್ಯೆ ಹೇಳುತ್ತಿದ್ದ. ಅಲ್ಲಿಂದ ರಾಜ್ ಭವನ್ ಹತ್ತಿರವೇ ಇದ್ದ "Rock Garden" ಗೆ ಹೋಗಿ ಸ್ವಲ್ಪ ಕಾಲ ಕಳೆದೆವು.

ಮುಂದಿನ ನಮ್ಮ ಪ್ರಯಾಣ ಕಲ್ಹತ್ತಿ ಜಲಪಾತಕ್ಕೆ(10km). ಇಲ್ಲಿಗೆ ಬಂದೊಡನೆಯೇ ಹತಾಶರಾದೆವು. ಸುಮಾರು 10 ಅಡಿಯಿಂದ ನೀರು ಬೇಳುವುದೇನೋ ಕಂಡಿತು, ನಮ್ಮ ಮನೆಯ ಶವರ್ ನೆನಪಾಗುತ್ತಿತ್ತು. ಅಲ್ಲಿದ್ದ ವೇರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೇನೋ ಭೇಟಿ ಕೊಟ್ಟೆವು. ಆದರೆ ಆ ಕಲ್ಹತ್ತಿ ಜಲಪಾತದ ಉಗಮಕ್ಕೆ ಹೋಗಬೇಕೆಂದು ಅನ್ನಿಸಲೇ ಇಲ್ಲ. ನಮ್ಮ ಪ್ರಯಾಣವೆಲ್ಲಾ ಮುಗಿದ ಮೇಲೆ ಮನೆಗೆ ಬಂದ ಮೇಲೆ ಗೆಳೆಯ ಯಶವಂತ್ ವಿವರಿಸಿದ ನಂತರ ತಿಳಿದದ್ದು ನಾವಿನ್ನು 3 ಕಿ.ಮಿ Trek ಮಾಡಿದ್ದರೆ ನಮಗಂದು ಮನೋಹರವಾದ ಜಲಪಾತ ಕಾದಿತ್ತೆಂದು. ಆದ್ದರಿಂದ ಕಲ್ಹತ್ತಿ ಜಲಪಾತಕ್ಕೆ ಹೋಗುವುದಾದರೆ ಅಲ್ಲಿನ ಚಾರಣವನ್ನು ಸಹ ವಿಚಾರಿಸಿಕೊಳ್ಳಿ. ಇಲ್ಲಿನ ಜಲಪಾತದಲ್ಲಿ ಸ್ನಾನ ಮಾಡಿದವರಿಗೆ ಎಲ್ಲ ರೋಗಗಳಿಂದ ಮುಕ್ತಿ ದೊರೆಯುತ್ತದೆಂಬ ನಂಬಿಕೆ ಇದೆ. ಕಾಡಿನ ಔಷಧೀಯ ಗಿಡಗಳನ್ನು ಬಳಸಿ ಹರಿದು ಬರುವ ಈ ನೀರಿಗೆ ರೋಗನಿರೋಧಕ ಶಕ್ತಿ ಇರಲಿಕ್ಕು ಸಾಕು.


ನಂತರ ಲಿಂಗದಹಳ್ಳಿ ಚಿಕ್ಕಮಗಳೂರು ಮಾರ್ಗವಾಗಿ ಶೃಂಗೇರಿ ಗೆ ಬಂದೆವು. ಹೊಟೇಲ್ ಒಂದರಲ್ಲಿ ತಂಗಿ ಮಾರನೆಯ ಬೆಳಿಗ್ಗೆ ತಾಯಿ ಶಾರದಾಂಬ, ವಿದ್ಯಾ ಶಂಕರ ದೇವಸ್ಥಾನಗಳಿಗೆ ನಮ್ಮ ಸಾಷ್ಟಾಂಗ ನಮಸ್ಕಾರಗಳನ್ನು ಹಾಕಿ ಸಿರಿಮನೆ ಜಲಪಾತಕ್ಕೆ ತೆರಳಿದೆವು.ಸಿರಿಮನೆ ಜಲಪಾತ ಶೃಂಗೇರಿಯಿಂದ ೧೫ ಕಿ.ಮಿ. ನೆಮ್ಮಾರ್ ಎಂಬ ಊರಿನಿಂದ ಋಷ್ಯಶೃಂಗ ದೇವಸ್ಥಾನ ಮಾರ್ಗವಾಗಿ ೧೩ ಕಿ.ಮಿ. ಸಿರಿಮನೆ ಜಲಪಾತವನ್ನು ಕಿಗ್ಗ ಜಲಪಾತವೆಂದೂ ಕರೆಯುತ್ತಾರೆ. ಸದಾ ಕೊರೆಯುವ ನೀರಿನಲ್ಲಿ ನಾವು ಆಟಾಡಿದೆವು. ಸಿರಿಮನೆ ಜಲಪಾತದಲ್ಲಿ ನೀರು 100 ಅಡಿ ಎತ್ತರದಿಂದ ಧುಮ್ಮಿಕ್ಕುತ್ತದೆ. ಶೃಂಗೇರಿಯಿಂದ ಕಿಗ್ಗದ ವರೆಗೆ ರಸ್ತೆ ಚೆನ್ನಾಗಿದೆ. ಅಲ್ಲಿಂದ ಜಲಪಾತದ ವರೆಗೆ ಇತ್ತೀಚೆಗೆ "ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ" ಅಡಿ ರಸ್ತೆ ಕಾಮಗಾರಿ ನಡೆಯುತ್ತಿದೆ.ಅಲ್ಲಿಯೇ ಹತ್ತಿರ ದಲ್ಲಿ ಮಘೇಬೈಲು ಜಲಪಾತವಿದೆ. ಈ ಎರಡು ಜಲಪಾತಗಳು ನಕ್ಸಲ್ ಪೀಡಿತ ಪ್ರದೇಶವೆನ್ನುತಾರಾದರೂ ಅಲ್ಲಿಗೆ ಹೋಗಲೂ ಯಾರೂ ಹಿಂಜರಿಯುವುದಿಲ್ಲ. ಮಘೇಬೈಲು ಜಲಪಾತದವರೆಗೂ ರಸ್ತೆ ಇಲ್ಲ. ಆ ಹಳ್ಳಿಯ ತೋಟದ ಕೆಲಸದವರೋ ಪರಿಚಿತರೋ ನಿಮ್ಮೊಟ್ಟಿಗಿದ್ದರೆ ಈ ಜಲಪಾತವನ್ನೂ ನೋಡಲು ಹೋಗಬಹುದು. ಕಾಡಿನಲ್ಲೇ ಐದಾರು ಕಿ.ಮಿ. Trek ಮಾಡಿ ಹೋಗಬೇಕೆಂದು ಮಘೇಬೈಲಿನ ಗ್ರಾಮಸ್ಥನೋರ್ವನು ತಿಳಿಸಿದನು. ಪುನಃ ಸಮಯದ ಅಭಾವದಿಂದಾಗಿ ಈ ಜಲಪಾತಕ್ಕೂ ಹೋಗಲಾಗಲಿಲ್ಲ. ತದನಂತರ ಶೃಂಗೇರಿಯಿಂದ ಕೆರೆಕಟ್ಟೆ ಮಾಳ ಘಾಟ್ ಕಾರ್ಕಳವಾಗಿ ಮನೆ ಸೇರಿದೆವು. ಎರಡು ದಿನಗಳ ಪ್ರವಾಸ ಮೂರು ದಿನಗಳಿಗೆ ವಿಸ್ತೃತವಾಗಿತ್ತು.

ಇಷ್ಟೇ ಅಲ್ಲದೇ ಹೊಯ್ಸಳ ಖಾತಿಯ "ಸಳ" ನ ಜನ್ಮಸ್ಥಳವಾದ ಅಂಗಡಿ, ಬೆಳವಾಡಿಯ ವೀರನಾರಾಯಣ ದೇವಸ್ಥಾನ ಅಮೃತಪುರದ ಅಮೃತೇಶ್ವರ ದೇವಸ್ಥಾನ ಖಾಂಡ್ಯದ ಮಾರ್ಖಂಡೇಶ್ವರ ಮತ್ತು ಜನಾರ್ಧನ ದೇವಸ್ಥಾನಗಳು ಹಿರೇಮಗಳೂರಿನ ಕೋದಂಡರಾಮನ ದೇವಸ್ಥಾನ ಕಳಸ (ದಕ್ಷಿಣ ಕಾಶಿ) ಯ ಕಳಸೇಶ್ವರ ದೇವಸ್ಥಾನ ಹೊರನಾಡಿನ ಅನ್ನಪೂರ್ಣೇಶ್ವರಿ ದೇವಸ್ಥಾನ, ದೇವನೂರಿನ ಲಕ್ಷ್ಮೀಕಾಂತ ದೇವಸ್ಥಾನ, ಮಾರ್ಲೆಯ ಚೆನ್ನಕೇಶವ ದೇವಸ್ಥಾನ ಎಲ್ಲವೂ ಸುಂದರವಾದವುಗಳೇ. ಅಷ್ಟೇ ಅಲ್ಲದೆ ಕುದುರೆಮುಖ ಅರಣ್ಯವನ, ಅಲ್ಲಿನ ಕಡುಗಳಲ್ಲಿನ ಚಾರಣ, ಮುಥೋಡಿಯಲ್ಲಿರುವ ವನ್ಯಮೃಗಗಳ ಅಭಯಾರಣ್ಯ ಎಲ್ಲವೂ ನಿಮ್ಮನ್ನು ಕೈಬೀಸಿ ಕರೆಯುತ್ತವೆ. (ಬಾಳೆಹೊನ್ನೂರಿನ ಬಳಿ ಇರುವ ತೋರಣಮಾವಿನಿಂದ 35 ಕಿಮಿ) ಒಟ್ಟಿನಲ್ಲಿ ಹೇಳುವುದಾದರೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸಕ್ಕೆ ತಕ್ಕ ತಾಣಗಳು ಬಹಳಷ್ಟಿವೆ. ಮಧುಚಂದ್ರಕ್ಕೆ ನವದಂಪತಿಗಳು ಕೇವಲ ಕೇರಳಕ್ಕೆ ಏಕೆ ಹೋಗುತ್ತರೆಂಬುದಕ್ಕೆ ಕಾರಣ ತಿಳಿಯುತ್ತಿಲ್ಲ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಒಳ್ಳೆಯ ರಸ್ತೆಗಳನ್ನು ಸರ್ಕಾರ ದಯಪಾಲಿಸಿದರೆ, ಬಹಳಷ್ಟು ಹೊಟೇಲು-ಲಾಡ್ಜ್ ಗಳಿಗೆ ಅನುಮತಿ ಸಿಕ್ಕಿದರೆ ಕೇರಳಕ್ಕಿಂತಲೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುವುದು ಖಂಡಿತ. ಪ್ರವಾಸೋದ್ಯಮ ಇಲಾಖೆಯೂ ಲಾಭಮಾಡುವುದರಲ್ಲಿ ಸಂಶಯವಿಲ್ಲ.

Wednesday, March 25, 2009

ತೀರ್ಥಹಳ್ಳಿ - ಕುಪ್ಪಳ್ಳಿ
















ಶಿವಮೊಗ್ಗ ಕರ್ನಾಟಕದ ಪ್ರತಿಷ್ಟಿತ ಜಿಲ್ಲೆಗಳಲ್ಲಿ ಒಂದು. ಸಾಗರ, ತೀರ್ಥಹಳ್ಳಿ, ಹೊಸನಗರ, ಸರ್ವರೀತಿಯಲ್ಲೂ ಹೆಸರು ಮಾಡಿರುವ ತಾಲೂಕುಗಳು. ನನ್ನ ಇತ್ತೀಜಿಗಿನ ಪ್ರವಾಸ ಕುಪ್ಪಳ್ಳಿಗೆ. ತೀರ್ಥಹಳ್ಳಿ ನನಗೆ ಹೊಸ ಊರೇನೂ ಅಲ್ಲ. ತೀರ್ಥಹಳ್ಳಿ ತಾಲೂಕಿನ ಒಂದು ಕುಗ್ರಾಮ - ಕೊಳವಳ್ಳಿ. ಇದು ನನ್ನ ತಂದೆಯ ತವರು ಮನೆ. (ಆದ್ದರಿಂದಲೇ ನನ್ನ ಅಂಕಿತದ ಎರಡನೆಯ ಅಕ್ಷರ ಕೊ). ಬೇಸಿಗೆಯ ಅರ್ಧ ರಜೆ ಕಳೆಯಲು ಇಲ್ಲಿಗೆ ಬರುತ್ತಲೇ ಇದ್ದೆ. (ಏಕೆಂದರೆ ಮೊದಲರ್ಧದ ರಜೆ ತಾಯಿಯ ತವರು ಮನೆಯಾದ ಹರಿಹರದಲ್ಲಿ ಕಳೆಯುತ್ತಿದ್ದೆ.)

ತೀರ್ಥಹಳ್ಳಿಯ ಸುತ್ತಮುತ್ತಲೂ ನೋಡಬಹುದಾದಂತಹ ಪ್ರೇಕ್ಷಣೀಯ ಸ್ಥಳಗಳು ಬಹಳಷ್ಟಿವೆ. ಆಗುಂಬೆ, ಹುಂಚ, ಅಂಬುತೀರ್ಥ, ಮೃಗವಧೆ ಹಲವಾರು ಅಂತಹ ಸ್ಥಳಗಳಲ್ಲಿ ಮೊದಲವುಗಳು. ಅದಲ್ಲದೇ ಮತ್ತೂ ಕೆಲವು ಸ್ಥಳಗಳು ಹೆಚ್ಚೇನೂ ಹೆಸರು ಮಾಡದೆ ಯಾತ್ರಿಕರನ್ನು ಕೈಬೀಸಿ ಕರೆಯುತ್ತಿದೆ. ಎರಡನೆಯ ರಾಷ್ಟ್ರಕವಿ ಕು.ವೆಂ.ಪುರವರ ಜನ್ಮಸ್ಥಳವಾದ ಕುಪ್ಪಳ್ಳಿಯ ಅಲಂಕೃತ ಮನೆ, ನಗರ-ಕವಲೇದುರ್ಗಗಳಲ್ಲಿನ ನಾಯಕ ವಂಶಸ್ಥರಾಳಿದ ಕೋಟೆಗಳು, ತೀರ್ಥಹಳ್ಳಿಯ ತುಂಗಾ ನದಿ, ಚಿಪ್ಪಲುಗುಡ್ಡೆ, ಕುಂದಾದ್ರಿ ಬೆಟ್ಟ ಇನ್ನೂ ಇತರೆ. ಮೇಲ್ಕಂಡ ಎಲ್ಲ ಕ್ಷೇತ್ರಗಳನ್ನು ನಾನು ನೋಡಿದ್ದೇನಾದರೂ ಇವೆಲ್ಲದರ ಮಾಹಿತಿಯನ್ನು ಈ ಲೇಖನದಲ್ಲಿ ನಾನು ಪ್ರಕಟಿಸಲಾರೆ. ಕಾಲಕೂಡಿಬಂದಾಗ ಉಳಿದೆಲ್ಲವುಗಳ ಬಗ್ಗೆ ಬರೆಯುತ್ತೇನೆ. ಕ್ಷಮೆ ಇರಲಿ.


ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಹಿರಿಯಡ್ಕ (9)- ಪೆರಡೂರು (15)- ಹೆಬ್ರಿ (29)- ಸೋಮೇಶ್ವರ (39)- ಆಗುಂಬೆ (49)- ತೀರ್ಥಹಳ್ಳಿ(81)- ಕುಪ್ಪಳ್ಳಿ (97)- ಕೊಪ್ಪ(108)


ಮಣಿಪಾಲದಿಂದ ಆಗುಂಬೆ ಘಾಟಿ ಎಡೆಗೆ ಹೊರಡಬೇಕು, ಮಣಿಪಾಲದಿಂದ ಪರ್ಕಳ... ಅಲ್ಲಿಂದ ನಾಲ್ಕೈದು ಕಿ.ಮಿ. ನಂತರದ ಊರೇ ಹಿರುಯಡ್ಕ. ಹಿರಿಯಡ್ಕದಿಂದ ನೇರ ರಸ್ತೆ ಕಾರ್ಕಳಕ್ಕೆ ಕರೆದೊಯ್ಯುತ್ತೆ. ಎಡಗಡೆಯ ವಿಶಾಲವಾದ ರಸ್ತೆ ಪೆರಡೂರು ಹೆಬ್ರಿ ಮಾರ್ಗವಾಗಿ ಸೋಮೇಶ್ವರಕ್ಕೆ ದಾರಿ ಮಾಡಿಕೊಡುತ್ತದೆ. ಪೆರಡೂರಿನ ಅನಂತಪದ್ಮನಾಭ ದೇವಸ್ಥಾನ ಅಲ್ಲಿನ ಬಸ್ ಸ್ಟಾಪ್ ಹತ್ತಿರವೇ ಇದೆ. ದರ್ಶನದಲ್ಲಿ ಆಸಕ್ತಿ ಇಲ್ಲವಾದರೆ ಹೆಬ್ರಿಗೆ ಹೊರಡಿ. ಅಲ್ಲಿಂದ ಸೋಮೇಶ್ವರಕ್ಕೆ. ಸೋಮೇಶ್ವರದಲ್ಲಿ ಸೀತಾ ನದಿ ಇದೆ. ಸೀತಾ ನದಿಯ ಜಲಪಾತವೂ ಇದೆ. ಎರಡೂ ನಿಮಗೆ ಒಳ್ಳೆಯ Trek ನೀಡಬಲ್ಲವುಗಳಾಗಿವೆ; ಹೆಬ್ರಿಯಿಂದ ಸೋಮೇಶ್ವರದವರೆಗೂ ರಸ್ತೆ ಸಿಕ್ಕಾಪಟ್ಟೆ ಹದಗೆಟ್ಟಿದೆ. ದ್ವಿಚಕ್ರ ವಾಹನದವರಿಗೆ ಮರ್ಯಾದೆಯೇ ಇಲ್ಲ!!!! ಎದುರುಗಡೆ ಬಸ್, ಲಾರಿ ಬಂದರೆ ನಮ್ಮ ದ್ವಿಚಕ್ರ ವಾಹನಗಳಿಗೆ ಆಸ್ಪದವೇ ಇಲ್ಲದಂತಾಗುತ್ತದೆ. ಸೋಮೇಶ್ವರದಿಂದ ಆಗುಂಬೆ ಘಾಟಿಯ ರಸ್ತೆ. ತೀಕ್ಷ್ಣ ತಿರುವುಗಳಿಂದ ಕೂಡಿರುವ ಈ ರಸ್ತೆಯಲ್ಲಿ ಗಾಡಿ ಚಲಿಸುವುದು ಅಷ್ಟು ಸುಲಭವಲ್ಲ. 10 ಕಿ.ಮಿ. ಘಾಟಿ ರಸ್ತೆಯಬಳಿಕ ನಿಮಗೆ ಕಾಣಸಿಗುವುದು ಜಗತ್ಪ್ರಸಿದ್ಧ ಆಗುಂಬೆ. ಮಳೆಗಾಲದಲ್ಲಿ ಅತಿಯಾದ ಮಳೆ ಸುರಿಯುವುದರಿಂದ ದಕ್ಷಿಣ ಚೀರಾಪುಂಜಿಯಂತಲೂ ಆಗುಂಬೆಯನ್ನು ಕರೆಯುವುದುಂಟು. ಇಲ್ಲಿಂದಲೇ ಸೂರ್ಯಾಸ್ತಮಾನದ ವಿಹಂಗಮ ನೋಟವನ್ನು ಕಾಣಬಹುದು. ನಮ್ಮಪ್ಪನ ಬಿಟ್ಟಿ ಸಲಹೆ - "ನವೆಂಬರ್ ನಿಂದ ಫ಼ೆಬ್ರವರಿಯವರೆಗೂ ಮೋಡಗಳಿಲ್ಲದಿರುವುದರಿಂದ ಸೂರ್ಯಾಸ್ತಮಾನ ಚೆನ್ನಾಗಿ ಕಾಣುತ್ತದೆ" ಎಂದು. ಆಗುಂಬೆಯ ಸಮೀಪವೇ ಒನಕೆಅಬ್ಬಿ ಜಲಪಾತ ಹಾಗು ಬರ್ಕಣ ಜಲಪಾತಗಳಿವೆ. ಇವೆರಡೂ ನಕ್ಸಲರ ಅಡಗುತಾಣವಾಗಿದೆ ಎಂದು ಹೇಳಲಾಗುತ್ತಿದೆ. ಆಗುಂಬೆಯಿಂದ ಚಿಕ್ಕಮಗಳುರಿನ ಕೊಪ್ಪ (35km), ಎನ್ ಆರ್ ಪುರ, ಶೃಂಗೇರಿ, ಹೊರನಾಡು ಹೋಗಲೂ ಒಂದು ರಸ್ತೆ, ತೀರ್ಥಹಳ್ಳಿ ಶಿವಮೊಗ್ಗಕ್ಕೆ ಹೋಗಲು ರಾಜ್ಯ ಹೆದ್ದಾರಿ SH-1 ಇದೆ. ತೀರ್ಥಹಳ್ಳಿಯ ರಸ್ತೆಯಲ್ಲಿ ಹೋಗುವಾಗ ದಿ ಶಂಕರ್ ನಾಗ್ ನಿರ್ದೇಶಿಸಿದ್ದ ಮಾಲ್ಗುಡಿ ಡೇಸ್ ನ ನೆನಪಾಗುತ್ತದೆ. ಆ ಶಾಲೆ, ಸ್ವಾಮಿಯ ಮನೆ, ಆ ಅಂಚೆ ಕಚೇರಿ ಎಲ್ಲವೂ ಇಂದಿಗೂ ಹಾಗೆಯೇ ಇದೆ ಎಂದೆನಿಸುತ್ತದೆ.

31 ಕಿ ಮಿ ಪ್ರಯಾಣದ ನಂತರ ತೀರ್ಥಹಳ್ಳಿ ಸಿಗುತ್ತದೆ. ಇಲ್ಲಿಂದಲೇ ನಗರ, ಹೊಸನಗರ, ಸಾಗರ, ಕುಪ್ಪಳ್ಳಿ, ಮೃಗವಧೆ ಎಲ್ಲದಕ್ಕೂ ಹೋಗಲೂ ಅನುಕೂಲಕರ ರಸ್ತೆಗಳಿವೆ. ನಾನು ಕೊಪ್ಪಕ್ಕೆ ಹೋದದ್ದು ತೀರ್ಥಹಳ್ಳಿ ಕುಪ್ಪಳ್ಳಿ ಮಾರ್ಗವಾಗಿ. ಸಾಧರಣ 28 ಕಿಮಿ ಹೆಚ್ಚು ಪ್ರಯಾಣ ಮಾಡಿದಂತಾಗುತ್ತದೆ. ಆದರೆ ಈ ರಸ್ತೆಯಲ್ಲಿ ಬರುವಾಗ ನಿಮಗೆ ಸಿಗುವ ಕುಪ್ಪಳ್ಳಿ ಎಂಬ ಪುಟ್ಟ ಊರು ಕು.ವೆಂ.ಪು ರವರು ಬೆಳೆದ ಊರು. ಶ್ರೀ ಎಸ್. ಎಂ. ಕೃಷ್ಣ ರವರು ಮುಖ್ಯಮಂತ್ರಿಗಳಾಗಿದ್ದಾಗ ಕು.ವೆಂ.ಪು ರವರ ಮನೆಯನ್ನು ಒಂದು ವಸ್ತುಸಂಗ್ರಹಾಲಯ, ಅಧ್ಯಯನ ಕೇಂದ್ರವನ್ನಾಗಿಸಲೋಸುಗ ಈ ಬೃಹತ್ ಕೆಲಸವನ್ನು ಮಾಡಿಸಿದ್ದಾರೆ, ಸಾಧಾರಣ ಒಂದು ಕೋಟಿಯವರೆಗೂ ಖರ್ಚು ಮಾಡಿಸಿ ಈ ಕಾರ್ಯ ಸಂಪೂರ್ಣವಾಗಿಸಿದ್ದಾರೆ. ಕು.ವೆಂ.ಪು ರವರ ಹಳೆಯ ಕಾಲದ ಮನೆಯನ್ನು ಜೀರ್ಣೋದ್ಧಾರ ಮಾಡಿ, ವಸ್ತುಸಂಗ್ರಹಾಲಯ, ಗ್ರಂಥಾಲಯವಾಗಿ ನಿರ್ಮಿಸಲಾಗಿದೆ. ಎರಡು ಅಂತಸ್ತಿನ ಈ ಮನೆ ಹಳೆಯಕಾಲದ ಚೌಕಿ ಮನೆ. ಅಡಿಗೆಮನೆ, ಬಾಣಂತಿಕೋಣೆ, ನಡುಮನೆ, ಅಂಗಳ ಎಲ್ಲವನ್ನೂ ಕೂಡಿರುವ ಈ ಮನೆಯಲ್ಲಿ ಹಳ್ಳಿಯ ಮನೆಗಳಲ್ಲಿ ಉಪಯೋಗಿಸುವ ಎಲ್ಲಾ ತರಹದ ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದಾರೆ. ಹಲವೆಲ್ಲಾ ಕು.ವೆಂ.ಪು ಮನೆಯಲ್ಲೆ ಉಪಯೋಗಿಸುತ್ತಿದ್ದವುಗಳಾಗಿವೆ. ಉದಾಹರಣೆಗೆ ಅಡಿಗೆಮನೆಗಳಲ್ಲಿ ಬಳಸುವ ಶ್ಯಾವಿಗೆ ಒರಳುಗಳು, ಚಕ್ಕುಲಿ ಒರಳುಗಳು ದೊಡ್ಡ ದೊಡ್ಡ ಕೊಳಗಗಳು - ನೀರು ಹಿಡಿದಿಡಲು, ಅನ್ನ ಮಾಡುವ ಕಲ್ಗಡಿಗೆಗಳು - ಕಂಚಿನದ್ದು ಹಾಗು ಬಳಪದ್ದು, ನೀರು ಕಾಯಿಸುವ ಹಂಡೆಗಳು, ಅಡಿಕೆ ಬೇಯಿಸುವ ಹಂಡೆಗಳು, ದೋಸೆ ಮಾಡುವ ಹಂಚುಗಳು, ಕಡಬು ಮಾಡುವ ಸರಗೋಲು, ಬೆತ್ತದ ಜರಡಿಗಳು, ಭತ್ತದ ಫಣತಗಳು (ಕಣಜಗಳು), ನೀರಿನ ಬಾನಿಗಳು, ತೋಟ, ಹೊಲ, ಗದ್ದೆಗಳಲ್ಲಿ ರೈತರು ಬಳಸುವ ಕತ್ತಿ, ಅರಗತ್ತಿ, ದೋಟಿ, ನೇಗಿಲು ನೊಗ, ಕಂಬಳಿ ಗೊಪ್ಪೆ, ಹಾಳೆ ಟೊಪ್ಪಿಗೆ, ಕೋವಿ,ದರಗೆಲೆ ತುಂಬುವ ಜಲ್ಲೆ, ನೇಗಿಲು, ಮೀನು ಹಿಡಿಯುವ ಕೂಣಿ ...........


ಉಪ್ಪರಿಗೆಯ (ಮೊದಲನೆಯ, ಎರಡನೆಯ ಅಂತಸ್ತನ್ನು ಉಪ್ಪರಿಗೆಯೆನ್ನುತ್ತಾರೆ ಕೋಣೆಗಳಲ್ಲಿ ಕುವೆಂಪು ರವರ ಅಪರೂಪದ ಭಾವಚಿತ್ರಗಳು, ಅವರು ಉಪಯೋಗಿಸುತ್ತಿದ್ದ ಲೇಖನಿ, ಕನ್ನಡಕ, ಗಡಿಯಾರ, ಗಾಂಧಿ ಟೋಪಿ, ಬಿಳಿ ಪಂಚೆ, ಊರುಗೋಲು, ಕುರ್ಚಿ, ಇವೆಲ್ಲವೂ ಇಲ್ಲಿವೆ. ಕುವೆಂಪು ರವರ ಕೇಷವನ್ನೂ ಇರಿಸಿದ್ದಾರೆ. ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಪತಿಗಳಾಗಿದ್ದಾಗಿನ ಭಾವಚಿತ್ರಗಳು ಅವರಿಗೆ ಸಿಕ್ಕ ಪ್ರಶಸ್ತಿ ಪತ್ರಗಳು, ಪದಕಗಳು - ಜ್ನಾನಪೀಠ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಗೌರವ ಡಾಕ್ಟರೇಟ್, ಎಲ್ಲವೂ ಅಲ್ಲಿ ಪ್ರದರ್ಶಿತ. ಅಲ್ಲಲ್ಲಿ ಕುವೆಂಪು ರವರ ಸುಂದರ ಕವನಗಳನ್ನು ಗೋಡೆಗಳ ಮೇಲೆ ಪ್ರದರ್ಶಿಸಿದ್ದಾರೆ. ಶಾಂತ ವಾತವರಣದಿಂದ ಕೂಡಿದ ಈ ಮನೆಯ ಪಕ್ಕದಲ್ಲೇ ಅಡಿಕೆಯ ತೋಟವಿದೆ. ಮನೆಯಿಂದ ಕಾಲ್ನಡಿಗೆ ದೂರದಲ್ಲಿ ಒಂದು ರಮ್ಯ ತಾಣವಿದೆ. ಅದೇ ಕವಿಶೈಲ. ಕುವೆಂಪುರವರು ತಮ್ಮ ಬಾಲ್ಯದ ದಿನಗಳಲ್ಲಿ ಇಲ್ಲಿಗೇ ಬಂದು ಕವನಗಳನ್ನು ಬರೆಯುತ್ತಿದ್ದರಂತೆ, ಇಲ್ಲಿಂದ ಪಶ್ಚಿಮ ಘಟ್ಟಗಳು ಬಹುಸುಂದರವಾಗಿ ಕಾಣುತ್ತದೆ. ಸೂರ್ಯಾಸ್ತಮಾನವೂ ಮನೋಹರವಾಗಿರುತ್ತದೆಂದು ಅಲ್ಲಿಯ ಮಾರ್ಗದರ್ಶಕ ತಿಳಿಸಿದನು,
ಕವಿಶೈಲದ ಬಗ್ಗೆ ಕು.ವೆಂ.ಪು ರವರ ವರ್ಣನೆ " ಓ ಕವಿಶೈಲ,........ ನಿನ್ನ ಸಂಪದವನೆನಿತು ಬಣ್ಣಿಸಲಳವು ಕವನದಲಿ? ಬೆಳಗಿನಲಿ ಬೈಗಿನಲಿ ಮಾಗಿಯಲಿ ಚೈತ್ರದಲಿ ಮಳೆಯಲ್ಲಿ ಮಂಜಿನಲಿ ಹಗಲಿನಲಿ ರಾತ್ರಿಯಲಿ ದೃಶ್ಯವೈವಿಧ್ಯಮಂ ರಚಿಸಿ ನೀಂ ಭುವನದಲಿ ಸ್ವರ್ಗವಾಗಿಹೆ ನನಗೆ"


೧೬-೫-೩೬ ರಂದು ತಿ.ನಂ. ಶ್ರೀಕಂಠಯ್ಯ, ಬಿ.ಎಂ. ಶ್ರೀಕಂಠಯ್ಯ, ಕು.ವೆಂ. ಪುಟ್ಟಪ್ಪನವರ ಮನೆಗೆ ಬಂದಾಗ ಅಲ್ಲಿಯ ಒಂದು ಗುಡ್ಡದ ಮೇಲೆ ಆ ನೆನಪಿಗೋಸ್ಕರ ತಮ್ಮ ಹೆಸರುಗಳನ್ನು ಕೆತ್ತಿದ್ದಾರೆ. ಅಲ್ಲಿ ಪೂಚಂತೆಯ ಹೆಸರೂ ಮೂಡಿದೆ. ಪುಟ್ಟ ಮಗುವಾಗಿದ್ದ ಅವರೂ ತಂದೆಯೊಟ್ಟಿಗೆ ಅಲ್ಲಿಗೆ ಹೋಗಿದ್ದರೇನೋ...... ಕು.ವೆಂ.ಪು ರವರ ಸಮಾಧಿಯೂ ಅವರು ಹೆಚ್ಚಾಗಿ ಇಷ್ಟಪಡುತ್ತಿದ್ದ ಕವಿಶೈಲದಲ್ಲಿ. ತೆಜಸ್ವಿಯರೂ ಅಲ್ಲೇ ಹತ್ತಿರದ ಜಾಗದಲ್ಲೇ ಸೇರಿಕೊಂಡಿದ್ದಾರೆ.


ಕುಪ್ಪಳ್ಳಿಯಿಂದ ಕೊಪ್ಪ ಸುಮಾರು 11 ಕಿಮಿ. ಕೊಪ್ಪದ ಸುತ್ತಲೂ ಮತ್ತೊಮ್ಮೆ ಯಾವಾಗಲಾದರೂ ವಿಹಾರರ್ಥಕ್ಕೆ ಹೋದಾಗ ಅದರ ಬಗ್ಗೆ ಲೇಖನವನ್ನು ನೀವು ನಿರೀಕ್ಷಿಸಬಹುದು. ಕವಲೆದುರ್ಗ, ಕೊಳವಳ್ಳಿಯ ಬಗ್ಗೆ ನನ್ನ ಮುಂದಿನ ಲೇಖನ. ಊಟ ತಿಂಡಿಗಾಗಿ ನಿಮಗೆ ತಾರಾ ಹೋಟೆಲುಗಳಿಲ್ಲ ಆದರೂ ಕಾಫಿ ಚಹಾ ಸಿಗಲು ಸಣ್ಣಪುಟ್ಟ ಹೊಟೇಲುಗಳಿವೆ, ಆಗುಂಬೆ, ತೀರ್ಥಹಳ್ಳಿ, ಕೊಪಗಳಲ್ಲಿ ಟಿ.ಬಿ ಗಳಿವೆ; ಲಾಡ್ಜ್ ಗಳೂ ಇವೆ.

ನಿಮಗೆ ಸುಖ ಪ್ರಯಾಣ ಕೋರುವ,

ಪ್ರ ಕೊ ಪ

Saturday, January 17, 2009

ಮಣಿಪಾಲ್ - ಕಾರ್ಲ - ಮೂಡ್ಬಿದ್ರಿ












ಕಳೆದ ವಾರಂತ್ಯದ ಪ್ರಯಾಣ ಮೂಡುಬಿದಿರಿಗೆ. ಮಣಿಪಾಲದಿಂದ ಮೂಡುಬಿದಿರಿಗೆ ಮಾರ್ಗಗಳು ಎರಡು. ಒಂದು ಮಣಿಪಾಲ - ಉಡುಪಿ - ಮಂಗಳೂರು - ಮೂಡುಬಿದರಿ ಅಥವಾ ಮಣಿಪಾಲ - ಕಾರ್ಕಳ - ಮೂಡುಬಿದರಿ. ಎರಡನೆಯ ಮಾರ್ಗ 60 ಕಿಮಿ ದೂರ. ನ್ಯಾಯವಾಗಿ ಅಂದರೆ ಸಾಧಾರಣ ವೇಗದಲ್ಲಿ ದ್ವಿಚಕ್ರ ವಾಹನ ಚಲಿಸಿದರೆ, 90 ನಿಮಿಷದ ಪ್ರಯಾಣ. ಅಲ್ಲಿ ಇಲ್ಲಿ ಚಹಾ-ಗೋಳಿಬಜೆ-ಬೀಡಿ ಅಂತ ನಿಲ್ಲಿಸುತ್ತಾ ಹೋದರೆ ಎರಡು ಗಂಟೆಯಲ್ಲಿ ತಲುಪಬಹುದು. ಮಧ್ಯದಲ್ಲಿ ಚಹಾ-ಗೋಳಿಬಜೆಗೆ ನಿಲ್ಲಿಸದೇ ಯಾವುದಾದರೂ ಒಳ್ಳೆಯ ಪ್ರೇಕ್ಷಣೀಯ ಸ್ಥಳ ನೋಡೋಣವೆಂಬುದು ನಮ್ಮ ಗುರಿಯಾಗಿತ್ತು. ಅಂತು ಇಂತು ಪ್ರಕಾಶ್ ಶೆಣೈ ಒಂದು ಮಾರ್ಗಸೂಚಿ ಸಿದ್ಧಪಡಿಸಿದ್ದ. ಅನುಮೋದಿಸುವುದಕ್ಕೆ ಹೆಚ್ಚೇನು ಗೊತ್ತಿಲ್ಲವಾದ್ದರಿಂದ ಅವನು ಹೇಳಿದ್ದಕ್ಕೆಲ್ಲಾ ಒಪ್ಪಿಯಾಗಿತ್ತು. ಪ್ರವಾಸ ಮಾರ್ಗ ಕೊಡ್ಯಡ್ಕದ ಅನ್ನಪೂರ್ಣೇಶ್ವರಿ ದೇವಸ್ಥಾನ, ಮೂಡುಬಿದಿರಿಯ ಸಾವಿರ ಕಂಬದ ಬಸದಿ, ಹಾಗು ಕರಾವಳಿ ಕರ್ನಾಟಕದಲ್ಲಿ ಚಿರಪರಿಚಿತರಾದ ಶ್ರೀ ಮೋಹನ್ ಆಳ್ವಾ ರವರು ನಡೆಸಿಕೊಡುವ "ಆಳ್ವಾಸ್ ವಿರಾಸತ್" ಗಳನ್ನೆಲ್ಲಾ ವೀಕ್ಷಿಸುವುದು.

ಮಣಿಪಾಲದಿಂದ ಸಾಧಾರಣ 10:30ಕ್ಕೆ ಹೊರಟು ಮೊದಲಿಗೆ ಕಾರ್ಕಳಕ್ಕೆ ಬಂದು ಸೇರಿದೆ. ಕಾರ್ಕಳ ಬಸ್ ಸ್ಟಾಂಡಿಗಿಂತಲೂ ಎರಡು ಕಿಮಿ ಮುಂಚೆಯೇ ಜೋಡುಕಟ್ಟೆ ಎಂಬ ಊರು ಸಿಗುತ್ತದೆ. ಇಲ್ಲಿಂದ ಕಾರ್ಕಳದ ಗೊಮ್ಮಟೇಶ್ವರನ ಏಕಶಿಲಾ ಮೂರ್ತಿ, ಚತುರ್ಮುಖ ಬಸದಿ ಗೆ ಸುಮಾರು 3 ಕಿಮಿ ದೂರ. ಜೋಡುಕಟ್ಟೆಯಿಂದ ನೇರ ಮಾರ್ಗದಲ್ಲಿ ಚಲಿಸಬೇಕು. ಕಾರ್ಕಳದ ಈ ಎರಡು ಸ್ಥಳಗಳನ್ನು ವೀಕ್ಷಿಸಿ ನಂತರವೂ ಮೂಡುಬಿದಿರಿ ಕಡೆಗೆ ಹೋಗಬಹುದು. ಕಾರ್ಕಳವನ್ನು ಬೈಪಾಸ್ ಮಾಡಲಿಚ್ಛಿಸುವವರು ಇಲ್ಲಿಂದ ಬಲಬದಿಗಿರುವ ಮಂಗಳೂರಿಗೆ ಹೋಗುವ ಉಪಮಾರ್ಗದಲ್ಲಿ ಚಲಿಸಬಹುದು. ಇಲ್ಲಿಂದ ಮಂಗಳೂರಿಗೆ 52 ಕಿಮಿ. ಅದೇ ರಸ್ತೆಯಲ್ಲಿ ಅತ್ತೂರು ಚರ್ಚ್ ಇದೆ. ಇದರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲವಾದ್ದರಿಂದ ಆನಂದ ಯಾಲಿಗಾರರ ಬ್ಲಾಗಿಗೆ ಲಿಂಕ್ ಮಾಡುತ್ತೇನೆ.http://yalanand.blogspot.com/2008_08_01_archive.html ಅದೇ ನೇರ ರಸ್ತೆಯಲ್ಲಿ ಸಾಗುತ್ತಾ ಹೋದರೆ, ಒಂದು ವೃತ್ತ. ಒಂದು ರಸ್ತೆ ಬಜಗೋಳಿ-ಶೃಂಗೇರಿ ಸೇರುತ್ತದೆ. ಪಶ್ಚಿಮದ್ದು ಪಡುಬಿದಿರಿಗೆ ಕರೆದೊಯ್ಯುತ್ತದೆ. ನೇರ ಮಾರ್ಗ ಮಂಗಳೂರಿಗೆ. ರಸ್ತೆ ರಾಷ್ಟ್ರೀಯ ಹೆದ್ದಾರಿ 13. ಅದೇ ರಸ್ತೆಯಲ್ಲಿ ಮುಂದುವರಿದರೆ, ಅಲಂಗಾರು ಎಂಬ ಊರು ಸಿಗುತ್ತದೆ. ಅಲ್ಲಿಂದ ಬಲಕ್ಕೆ ತಿರುಗಿ 5 ಕಿಮಿ ಚಲಿಸಿದರೆ, ಕೊಡ್ಯಡ್ಕ ಕ್ಷೇತ್ರ. ಇಲ್ಲಿನ ಅನ್ನಪೂರ್ಣೇಶ್ವರಿ ದೇವಿಯ ದರ್ಶನಕ್ಕೆ ಮುಂದಾದೆವು. ಸುಮಾರು ೮-೧೦ ವರ್ಷಗಳ ಹಿಂದೆಯಷ್ಟೇ ಈ ದೇವಸ್ಥಾನ ನಿರ್ಮಿತವಾದದ್ದು. ಭಕ್ತನೋರ್ವನಿಗೆ ದೇವಿ ಕನಸಲ್ಲಿ ಬಂದು ಒಂದು ದೇವಾಲಯ ಕಟ್ಟಿ ಅನ್ನದಾನ ಮಾಡಿದರೆ ಆತನಿಗೆ ಶ್ರೇಯಸ್ಸಗುವುದೆಂದು ವರವಿಟ್ಟ ಕಾಣಿಕೆಯೇ ಈ ದೇವಾಲಯ. ಈ ದೇವಾಲಯದಲ್ಲಿನ ಅಮ್ಮನ ಮೂರ್ತಿ ಬಹಳ ಸುಂದರವಾಗಿದೆ. ಮಧ್ಯಾಹ್ನ ಒಂದು ಗಂಟೆಗೆ ಪ್ರಸನ್ನಗಣಪತಿ, ವೀರಾಂಜನೇಯರಿಗೆಲ್ಲ ಮಂಗಳಾರತಿಯಾದ ಬಳಿಕ ದೇವಿಗೆ ಮಹಾ ಮಂಗಳಾರತಿ. ಭಜನಾಪ್ರಿಯರು ಸದಾಕಾಲ ಭಜನೆಗಳನ್ನು ಹಾಡಲು ಅವಕಾಶವಿದೆ. ತದನಂತರ ಪ್ರಸಾದ ವಿನಿಯೋಗ. ಭೋಜನ ಶಾಲೆಯಂತು ಬಹಳ ಸ್ವಚ್ಛವಾಗಿಟ್ಟಿದ್ದಾರೆ. ದೇವಾಲಯದ ಸುತ್ತಲೂ ಜಾನವಾರುಗಳನ್ನು ಸಾಕಿದ್ದಾರೆ. ಜಿಂಕೆಗಳು, ಮೊಲಗಳು, ಪಾರಿವಾಳಗಳು, ಕುದುರೆ, ಆನೆಗಳನ್ನೂ ಸಾಕಿದ್ದರೆ. ದೇವಸ್ಥಾನದ ಆವರಣದಲ್ಲೇ ಆಂಜನೇಯಸ್ವಾಮಿ ಸಂಜೀವಿನಿ ಪರ್ವತ ಎತ್ತಿಹಿಡಿದಿರುವ ಬೃಹತ್ ಮೂರ್ತಿ ಇದೆ.

ಈ ದೇವಸ್ಥಾನದಿಂದ ಹೊರಟು ಅಲಂಗಾರಿಗೆ ವಾಪಸ್ ಬಂದು ಮೂಡುಬಿದಿರೆಯ ಸಾವಿರ ಕಂಬದ ಬಸದಿಗೆ ಹೊರಟೆವು. ಅಲಂಗಾರಿನಿಂದ 2 ಕಿಮಿ ನಲ್ಲಿ ಮೂಡುಬಿದಿರಿ ಸೇರಬಹುದು, ಮೂಡುಬಿದಿರೆ ನೋಡುವ ಮುನ್ನ ಇದ್ದ ಕಲ್ಪನೆಯೇ ಬೇರೆಯಾಗಿತ್ತು. ಮೂಡುಬಿದಿರೆ ಬಸದಿ ಪ್ರಾಯಶ: ಸಾವಿರ ಕಂಬಗಳಿರುವುದರಿಂದ ಅತಿ ದೊಡ್ಡ ಬಸದಿ ಇರಬಹುದೆಂದು ಭಾವಿಸಿದ್ದೆ. ನಂತರವೇ ತಿಳಿದದ್ದು - ಒಟ್ಟು ಮೂರು ನೆಲೆಗಳಲ್ಲಿರುವ ದೊಡ್ಡ ಕಂಬಗಳು ಅವುಗಳಿಗೆ ಅಲಂಕಾರಕ್ಕಾಗಿ ಆಧಾರಕ್ಕಾಗಿ ಜೋಡಿಸಲಾದ ಚಿಕ್ಕ ಕಂಬಗಳನ್ನೆಲ್ಲಾ ಸೇರಿಸಿದರೆ ೧೦೦೦ ಕಂಬಗಳಿವೆಯೆಂದು. ರಚನೆಯಲ್ಲಿ ನೇಪಾಳಿ ವಿನ್ಯಾಸದಲ್ಲಿ ಕ್ರಿ.ಶ. 1430 ನಿರ್ಮಿತವಾದ ಈ ಬಸದಿಯನ್ನು ಹೊಸಬಸದಿ ಎಂದಾಗಿ, ಶ್ರೀ ಚಂದ್ರನಾಥಸ್ವಾಮಿಯು ಆರಾದನೆಗೊಳ್ಳೊವುದರಿಂದ ಚಂದ್ರನಾಥ ಸ್ವಾಮಿ ಬಸದಿ ಎಂದೂ ಕರೆಯುತ್ತಾರೆ. ದಕ್ಷಿಣಕಾಶಿ ಎಂದೆನಿಸಿಕೊಂಡ ಮೂಡುಬಿದಿರೆಯಲ್ಲಿ ಮತ್ತೂ ಕೆಲವು ಬಸದಿಗಳಿವೆ. ಭೈರಾದೇವಿ ಮಂಟಪದಲ್ಲಿನ ಒಂದೆರಡು ಕಂಬಗಳ ಚಿತ್ರಗಳನ್ನು ಜೋಡಿಸಿದ್ದೇನೆ.



ಅಲ್ಲಿಂದ ಡಾ|| ಮೋಹನ್ ಆಳ್ವರ ನೇತೃತ್ವದಲ್ಲಿ ಪ್ರತಿ ವರ್ಷವೂ ನಡೆಯುವ ಆಳ್ವಾಸ್ ವಿರಾಸತ್ ಗೆ ಹೊರಟೆವು. ವಿರಾಸತ್ ನಡೆಯುವುದು ಮಿಜಾರ್ ಎಂಬ ಊರಲ್ಲಿ. ಇದು ಮೂಡುಬಿದಿರೆಯಿಂದ ಮಂಗಳೂರಿಗೆ ಹೋಗುವ ದಾರಿಯಲ್ಲಿದೆ. ವಿರಾಸತ್ ನಡೆಯುವ ಈ ಸಭಾ ಸ್ಥಳದ ಹೆಸರು ಶೋಭಾವನ. ಶೋಭಾವನದ ಒಳಗೆ ಬರುವಾಗಲೇ ತಂಪಾದ ಆಯುರ್ವೇದಿ ಗಿಡ ಮೂಲಿಕೆಗಳ ತೋಟವೊಂದು ಕೈಬೀಸಿ ಕರೆಯುತ್ತದೆ. ಈ ತೋಟದಲ್ಲಿ ಸಾವಿರಕ್ಕೂ ಹೆಚ್ಚು ಮನೆ ಮದ್ದಿನ ಸಸ್ಯಗಳ ತೋಟವಿದೆ. ಪ್ರತಿಯೊಂದು ಸಸ್ಯದ ಆರೋಗ್ಯ ಮೌಲಯವನ್ನು ಅಲ್ಲಿ ತಿಳಿಸಲಾಗಿದೆ. ಡಾ ಆಳ್ವರು ಆಯುರ್ವೇದ ವೈದ್ಯರಾದ್ದರಿಂದ ಇಂತಹ ಒಂದು ಸಸ್ಯ ತೋಟದ ಹೊಸಪ್ರಯೋಗ ಅಷ್ಟು ಕಷ್ಟ ಆಗಿರಲಿಕ್ಕೆ ಇಲ್ಲ. ಶೋಭಾವನದ ಈ ಸಸ್ಯ ತೋಟ ವರ್ಷಾವಧಿಯೂ ಪ್ರವೇಶಕ್ಕಿರುವುದಿಲ್ಲ. ಆಲ್ವಾಸ್ ನುಡಿಸಿರಿ, ವಿರಾಸತ್, ನಡೆಯುವ ಸಂದರ್ಭದಲ್ಲಿ ಮಾತ್ರ ತೆರೆದಿರುತ್ತದೆ.

ಟ್ರಿಪ್ ದಿನಾಂಕ - 10th Jan 2009
ಟ್ರಿಪ್ ಮೀಟರ್ - 71 ಕಿ ಮೀ
ಪ್ರಯಾಣ ಮಾರ್ಗ - {() ಗಳಲ್ಲಿ ಕಿ ಮಿ}

ಮಣಿಪಾಲ (0)- ಜೋಡುಕಟ್ಟೆ (31)- ಅತ್ತೂರು ಚರ್ಚ್ (33)- ಅಲಂಗಾರ್ (50)- ಕೊಡ್ಯಡ್ಕ (55)- ಅಲಂಗಾರ್ (60)- ಮೂಡುಬಿದಿರೆ (62)- ಮಿಜಾರ್ (71)

ಮಣಿಪಾಲದಿಂದ ಮೂಡುಬಿದಿರೆಯವರೆಗೂ ರಸ್ತೆ ಬಹಳ ಚೆನ್ನಗಿದೆ. ಭಾನುವಾರದಂದು ಗಾಡಿ ಓಡಿಸಲು ಮಜಾ ಬರುತ್ತದೆ....ಏಕೆಂದರೆ ರಸ್ತೆ ಪೂರ್ಣ ನಮ್ಮಂತಹ ಹವ್ಯಾಸಿ ಪಯಣಿಗರಿಗೆ ಮಾತ್ರ ;-) ಕಾರ್ಕಳದಲ್ಲಿ, ಮೂಡುಬಿದಿರೆಯಲ್ಲಿ ಒಳ್ಳೆಯ ಹೊಟೆಲುಗಳಿವೆ.


ನಿಮಗಿನ್ನು ಶುಭ ಪ್ರಯಾಣ ಕೋರುವ,


ಪ್ರಕೊಪ
ಪ್ರವೀಣ್ ಪಟವರ್ಧನ್